July 8, 2026
Wednesday, July 8, 2026
spot_img

ರೆಡ್ ಅಲರ್ಟ್ ಬೆನ್ನಲ್ಲೇ ವಯನಾಡಿನಲ್ಲಿ ಕಟ್ಟುನಿಟ್ಟಿನ ಕ್ರಮ: ಕ್ವಾರಿ, ಟ್ರೆಕ್ಕಿಂಗ್, ಸಾಹಸ ಪ್ರವಾಸೋದ್ಯಮಕ್ಕೆ ತಾತ್ಕಾಲಿಕ ಬೀಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ವಯನಾಡು ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ, ಭೂಕುಸಿತದ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕ್ವಾರಿಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ವಿಪತ್ತು ನಿರ್ವಹಣಾ ಕಾಯ್ದೆ–2005ರ ಸೆಕ್ಷನ್ 34ರಡಿ ಈ ಆದೇಶ ಹೊರಡಿಸಲಾಗಿದ್ದು, ಮುಂದಿನ ಸೂಚನೆ ಬರುವವರೆಗೆ ಕ್ವಾರಿ ಚಟುವಟಿಕೆಗಳನ್ನು ಸಂಪೂರ್ಣ ನಿಲ್ಲಿಸಬೇಕಾಗಿದೆ.

ಜೊತೆಗೆ, ಭೂಕುಸಿತ ಹಾಗೂ ಪ್ರಕೃತಿ ವಿಕೋಪದ ಅಪಾಯ ಇರುವ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳು ಸೇರಿದಂತೆ ಪ್ರವಾಸಿ ವಸತಿ ಕೇಂದ್ರಗಳ ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಲು ಕೂಡಾ ಸೂಚಿಸಲಾಗಿದೆ. ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳು, ಟ್ರೆಕ್ಕಿಂಗ್, ಹಾಗೂ ಯಂತ್ರಗಳ ಮೂಲಕ ನಡೆಯುವ ಮಣ್ಣು ಮತ್ತು ಕಲ್ಲು ತೆಗೆಯುವ ಕಾರ್ಯಗಳಿಗೂ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ಭೂಕುಸಿತದ ಅಪಾಯ ಹೆಚ್ಚಿರುವ ಮುಂಡಕ್ಕೈ–ಚೂರಲ್‌ಮಲ ವಿಪತ್ತು ಪೀಡಿತ ಪ್ರದೇಶ, ಕಲ್ಲಾಡಿ–ಅನಕಂಪೊಯಿಲ್ ಸುರಂಗ ಮಾರ್ಗ ಹಾಗೂ ಇತರ ಅಪಾಯಕಾರಿ ಪ್ರದೇಶಗಳಲ್ಲಿ ಅಗತ್ಯವಿದ್ದರೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ ವಿಶೇಷ ಸೂಚನೆ ನೀಡಿದೆ.

ಇದನ್ನೂ ಓದಿ:


ಈ ಸ್ಥಳಾಂತರ ಕಾರ್ಯವನ್ನು ಮೆಪ್ಪಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಹಾಗೂ ವೆಲ್ಲರಿಮಲ ಗ್ರಾಮಾಧಿಕಾರಿ ಜಂಟಿಯಾಗಿ ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕರು ಸಂಪೂರ್ಣ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !