ಹೊಸದಿಗಂತ ವರದಿ, ಮಹಾಲಿಂಗಪುರ:
ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯಲ್ಲಿ ನಮ್ಮ ಪರಂಪರೆ ಕಾರ್ಯಕ್ರಮದಡಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಾಲೆಯ ಅಂಗಳದಲ್ಲಿ ಪಾಲಕರನ್ನು ಡೆಸ್ಕ್ ಮೇಲೇ ಕೂಡ್ರಿಸಿ ತಟ್ಟೆಯಲ್ಲಿ ಪಾದಗಳನ್ನಿರಿಸಿ ತೊಳೆದು ಹೂಮುಡಿಸಿ ಪೂಜೆ ಮಾಡಿ ಹಣೆ ಮಣಿದು ಆಶೀರ್ವಾದ ಪಡೆದರು. ನಂತರ ಪಾದತೊಳೆದ ನೀರನ್ನು ಹೂಗಿಡಗಳಿಗೆ ಉಣಿಸಿದರು. ಇಂಥ ಭಾವಪೂರ್ಣ ಕಾರ್ಯಕ್ರಮದಲ್ಲಿ ಪಾಲಕರು ಭಾವುಕರಾದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆಎಲ್ಇ ಡಿಪ್ಲೋಮಾ ಕಾಲೇಜ್ ಪ್ರಾಚಾರ್ಯ ಎಸ್.ಐ. ಕುಂದಗೋಳ ಮಾತನಾಡಿ, ವಿದ್ಯಾರ್ಥಿಗಳು ಹೆತ್ತವರಿಗೆ ಋಣಿಯಾಗಿ, ಗುರುಗಳಿಗೆ ವಿಧೇಯರಾಗಿ, ಸಮಾಜದಲ್ಲಿ ಸಜ್ಜನ ನಾಗರಿಕರಾಗಿ ಬಾಳಬೇಕು, ಪಾಲಕರು ದಾರಿ ತಪ್ಪಿಸುವ ಧಾರಾವಾಹಿ ಮೋಹದಿಂದ ಹೊರಬಂದು ಮಕ್ಕಳಿಗೆ ಸಂಸ್ಕಾರ ಕೊಡುವ ಮೂಲಕ ದಾರಿ ತೋರಿಸುವ ಕೆಲಸ ಮಾಡಬೇಕು ಎಂದರು.
ಪ್ರೌಢಶಾಲೆಯ ಉಪಪ್ರಾಂಶುಪಾಲ ಬಿ.ಎನ್.ಅರಕೇರಿ ಮಾತನಾಡಿ, ಪಾಲಕ, ಶಿಕ್ಷಕ, ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ವೃದ್ಧಿಗಾಗಿ ಇಂಥ ಮೌಲ್ಯಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ