ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದವರಿಗೆ ಒಮಿಕ್ರಾನ್ ಸೋಂಕಿನಿಂದ ತೀವ್ರತರದ ಸಮಸ್ಯೆಯಿಲ್ಲ. ಹಾಗಾಗಿ ಲಸಿಕೆ ಕೆಲಸ ಮಾಡುತ್ತಿದೆ ಎಂಬುದು ಖಾತರಿಯಾಗಿದೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು ಎಂದು ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಅವರಿಂದು ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್ ಸಂಬಂಧಿಸಿದ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಜ. 10ರಿಂದ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಕೊಡಲಾಗುವುದು. ಬೂಸ್ಟರ್ ಡೋಸ್ ಅನ್ನು 60 ವರ್ಷ ಮೇಲ್ಪಟ್ಟವರು, ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಕೊಡಲಾಗುತ್ತದೆ. ಮಕ್ಕಳಿಗೆ 15-18 ವರ್ಷದವರಿಗೂ ಶೀಘ್ರವೇ ಕೊಡಲಾಗುವುದು ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಕೆಲ ವಿಷಯ ಪ್ರಸ್ತಾಪ ಮಾಡಿದೆ. ಒಮಿಕ್ರಾನ್ ಅನ್ನೋ ಪ್ರಬೇಧ ಅತ್ಯಂತ ವೇಗವಾಗಿ ಹರಡುತ್ತಿರೋ ಪ್ರಬೇಧವಾಗಿದೆ. ಡೆಲ್ಟಾ ಪ್ರಭೇದದ ತೀವ್ರತೆ ಹೆಚ್ಚು, ಆದರೆ ಒಮಿಕ್ರಾನ್ ತೀವ್ರತೆ ಕಡಿಮೆ ಎಂದ ಸಚಿವರು, ವಿದೇಶದಿಂದ ಬರುವ ಪ್ರಯಾಣಿಕರು, ರೈಲು ನಿಲ್ದಾಣ, ಬರುವ ಮುನ್ನ ಇರುವ ಸುವಿಧಾ ನಿಯಮ ಪಾಲಿಸಲು ಮಾರ್ಗಸೂಚಿ ಬಗ್ಗೆ ಚರ್ಚಿಸಲಾಗಿದೆ. ಎಲ್ಲಾ ಗಡಿಗಳಲ್ಲಿ, ಚೆಕ್ ಪೋಸ್ಟ್ಗಳಲ್ಲಿ ನಿಗಾ ಇಡಲು ಸೂಚಿಸಲಾಗಿದೆ ಎಂದು ಹೇಳಿದರು.
ಕೋವಿಡ್ ನಿಯಂತ್ರಣ ಮಾಡಲು ರಾಜ್ಯ ಮಟ್ಟದಲ್ಲಿ ಅನೇಕ ಅಧಿಕಾರಿಗಳಿಗೆ ನಾಯಕತ್ವ ನೀಡಲಾಗಿದೆ. ಯಾವ ಅಧಿಕಾರಿಗಳು ಇತರೆ ಅಧಿಕಾರಿಗಳ ಜೊತೆ ಸಂಪರ್ಕ ಇರಬೇಕು ಎಂದು ಸೂಚಿಸಲಾಗಿದೆ. ಈ ಬಾರಿ ನಿಯಂತ್ರಣ ಮಾಡಲು ಸಿಎಂ ನಮಗೆ ಸೂಚಿಸಿದ್ದು, ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದರು.
10ಸಾವಿರ ಗೃಹ ವೈದ್ಯರ ನಿಯೋಜನೆ
ಬಿಬಿಎಂಪಿ ವಲಯದಲ್ಲಿ ಶೇ. 80ರಷ್ಟು ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಕೂಡ ಚರ್ಚೆ ಮಾಡಲಾಗಿದೆ. ಪ್ರತೀ 8 ವಲಯಗಳಿಗೆ ಕಮಾಂಡ್ ಸೆಂಟರ್ ಮಾಡಲಾಗುವುದು. ಯಾವುದೇ ವ್ಯಕ್ತಿಗೆ ಪಾಸಿಟಿವ್ ಬಂದಾಗ, ಸೋಂಕಿತರಿಗೆ ಕರೆ ಮಾಡಲಾಗುವುದು. ಮುಂದಿನ ಏಳು ದಿನ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಟೆಲಿ ಟ್ರಯಾಸಿಕ್, ಟೆಲಿ ಕೌನ್ಸೆಲಿಂಗ್ ಮೂಲಕ ಕ್ರಮವಹಿಸಲಾಗುತ್ತದೆ. ಇದಕ್ಕಾಗಿ 10ಸಾವಿರ ಗೃಹ ವೈದ್ಯರ ನಿಯೋಜನೆ ಮಾಡಲಾಗಿದೆ ಎಂದರು.
ಅನಗತ್ಯ ಆಸ್ಪತ್ರೆಗೆ ದಾಖಲಾಗಬೇಕಿಲ್ಲ
ಕೋವಿಡ್ ಅಥವಾ ಒಮಿಕ್ರಾನ್ ಪಾಸಿಟಿವ್ ಬಂದಾಗ, ಆಸ್ಪತ್ರೆಗೆ ಆತಂಕದಿಂದ ದಾಖಲಾಗೋದು ಬೇಡ. ಯಾರು ಆಸ್ಪತ್ರೆಗೆ ಸೇರಬೇಕು ಎಂದು ಡಾ. ರವಿ ಅವರ ತಜ್ಞರ ಸಮಿತಿ ನೀಡಲಿದೆ. ಮಾರ್ಗಸೂಚಿ, ಅಡ್ಮಿಷನ್ ಪಾಲಿಸಿ ಪ್ರಕಾರ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುವುದು. ಸೋಂಕಿತ ವ್ಯಕ್ತಿಯ ಎಲ್ಲ ಪ್ರಾಥಮಿಕ ಸಂಪರ್ಕಿತರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಡಾ. ಸುಧಾಕರ್ ತಿಳಿಸಿದರು.