ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ನಡೆದ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಮುಧೋಳ ತಾಲೂಕು ಬಂದ್ ಘೋಷಿಸಿದ್ದಾರೆ. ರೈತ ಮುಖಂಡರ ಆಕ್ರೋಶ ಕಟ್ಟೆಹೊಡೆದು ಇಂದು ಬೆಳಗ್ಗೆಯಿಂದಲೇ ಫೀಲ್ಡಿಗಿಳಿದು ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ರಸ್ತೆಯಲ್ಲೂ ವಾಹನ ಸಂಚಾರವಿಲ್ಲದೆ ಮುಧೋಳ ರಸ್ತೆಗಳೆಲ್ಲವೂ ಬಿಕೋ ಎನ್ನುತ್ತಿವೆ. ಜಮಖಂಡಿ, ನಿಪ್ಪಾಣಿ ಮುಂತಾದ ಕಡೆಗಳಿಂದ ಬಾಗಲಕೋಟೆಗೆ ಬರಬೇಕಾಗಿದ್ದ ಬಸ್ಗಳು ಬಂದಿಲ್ಲ. ಈ ಕಡೆಯಿಂದಲೂ ಯಾವುದೇ ಬಸ್ ಹೋಗಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೆಳಗ್ಗೆಯಿಂದ ರೈತರು ನಗರದ ಪ್ರಮುಖ ಸ್ಥಳಗಳಲ್ಲಿ ಧರಣಿ ನಡೆಸುತ್ತಿದ್ದು, ಪ್ರತಿ ಟನ್ ಕಬ್ಬಿಗೆ ₹2,900 ದರ ನಿಗದಿ ಪಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಪ್ರತಿಭಟನೆ ಹಿನ್ನೆಲೆ ತಾಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನ.16 ಬೆಳಿಗ್ಗೆಯಿಂದ ನ.19ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇನ್ನೂ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಮುಧೋಳ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಬೆಂಬಲ ಸೂಚಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಕಬ್ಬು ಬೆಳೆಗಾರರು ತಿ ಟನ್ ಕಬ್ಬಿಗೆ 2900 ರೂ ದರ ನಿಗದಿ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದರು. ನಿನ್ನೆ ಸರ್ಕಾರ ಪ್ರತಿಭಟನಾಕರರ ಹೋರಾಟಕ್ಕೆ ಮಣಿದು ಮೂವರು ಸಚಿವರ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿತು. ಅಲ್ಲಿಯೂ ರೈತರ ಮನವಿಗೆ ಬಗ್ಗದ ಸಚಿವರು ಸಿಎಂ ಮನವಿ ಮಾಡುವುದಾಗಿ ತಿಳಿಸಿದರು. ಕೂಡಲೇ ತಮ್ಮ ಸಮಸ್ಯೆ ಬಗೆಹರಿಸಬೇಕೆಂದು ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ನಿನ್ನೆ ನಡೆದ ಸಂಧಾನ ಸಭೆ ವಿಫಲವಾದ್ದರಿಂದ ರೈತರು ಇಂದು ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.