ಹೊಸದಿಗಂತ ವರದಿ, ಮಂಡ್ಯ :
ಈಗ ಬೇಸಿಗೆ ರಜೆ. ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ನದಿ ಪಾತ್ರದ ಸ್ಥಳಗಳಿಗೆ ಆಗಮಿಸುತ್ತಿರುವ ಪ್ರವಾಸಿಗರು ಬೇಸಿಗೆಯ ಧಗೆಯಿಂದ ಪಾರಾಗಲು ನದಿಗಿಳಿಯುತ್ತಿದ್ದಾರೆ. ಮಳೆಯ ಕೊರತೆಯಿಂದ ನದಿ ಪಾತ್ರಗಳಲ್ಲೂ ನೀರಿನ ರಭಸವಿಲ್ಲ. ಸುರಕ್ಷಿತ ಜಾಗಗಳಲ್ಲಿ ಕುಟುಂಬ ಸಮೇತ ನದಿಗಿಳಿದು ಜಾಲಿಯಾಗಿ ಈಜಾಡುತ್ತಾ, ಜಲಕ್ರೀಡೆಯಾಡುತ್ತಾ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ.
ಶ್ರೀರಂಗಪಟ್ಟಣ ಸಮೀಪವಿರುವ ಎಡಮುರಿ, ಬಲಮುರಿ, ಗೋಸಾಯ್ಘಾಟ್, ಶ್ರೀ ನಿಮಿಷಾಂಬ ದೇವಸ್ಥಾನ ಸೇರಿದಂತೆ ವಿವಿಧೆಡೆ ಪ್ರವಾಸಿಗರ ದಂಡೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಮೈಸೂರು, ಬೆಂಗಳೂರು ಸೇರಿದಂತೆ ಇತರೆ ಭಾಗಗಳಿಂದ ವಾಹನಗಳಲ್ಲಿ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಪ್ರವಾಸಿಗರು ಸ್ಥಳ ವೀಕ್ಷಣೆಗಿಂತಲೂ ಹೆಚ್ಚಾಗಿ ನದಿಗಿಳಿದು ಸಂತಸದಿಂದ ಕಾಲ ಕಳೆಯುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದಾರೆ. ಇದರಿಂದ ಬಿಸಿಲ ಧಗೆ, ಉಷ್ಣಹವೆಯಿಂದ ಪಾರಾಗಿ ತಂಪಾದ ಹಿತಾನುಭವ ಪಡೆದುಕೊಳ್ಳುವುದಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಬೆಳಗ್ಗೆ 10 ಗಂಟೆಗೆ ಬಂದವರು ಅಲ್ಲಿಯೇ ನೆರಳಿರುವ ಜಾಗಗಳಲ್ಲಿ ಉಪಹಾರ ಸೇವಿಸಿ ಆನಂತರ ಎಲ್ಲರೂ ನದಿಗಿಳಿದು ಸ್ವಚ್ಛಂದವಾಗಿ ಆಟವಾಡುತ್ತಾ ಕಾಲ ಕಳೆಯುವುದಕ್ಕೆ ಮುಂದಾಗುತ್ತಿದ್ದಾರೆ. ಮಹಿಳೆಯರು, ಮಕ್ಕಳೆಲ್ಲರೂ ಕುಟುಂಬದ ಸದಸ್ಯರೊಂದಿಗೆ ನೀರಿನಲ್ಲಿ ಮಿಂದು ದೇಹವನ್ನು ಸುದೀರ್ಘ ಅವಽಯವರೆಗೆ ತಂಪಾಗಿಸಿಕೊಂಡು ಬಿಸಿಲು ಕಡಿಮೆಯಾದ ಬಳಿಕ ದೇವಸ್ಥಾನ ಭೇಟಿ, ಸ್ಥಳ ವೀಕ್ಷಣೆಗೆ ತೆರಳುತ್ತಿದ್ದಾರೆ.