ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ 14 ಜನ ವೈದ್ಯರಿಗೆ ಕೋವಿಡ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳನ್ನು ಪ್ರಾಯೋಗಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ವೈದ್ಯರೂ ಸೇರಿದಂತೆ 150ಕ್ಕೂ ಹೆಚ್ಚು ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಶುಕ್ರವಾರ ಕೇವಲ 6 ಶಸ್ತ್ರಚಿಕಿತ್ಸೆ ಹಾಗೂ 3-4 ತುರ್ತು ಚಿಕಿತ್ಸೆಗಳಿಗೆ ಮಾತ್ರ ಸೇವೆ ಒದಗಿಸಲಾಯಿತು ಎಂದು ಸಂಸ್ಥೆಯ ಡೀನ್ ಡಾ. ಉಮೇಶ್ ಭದಾನಿ ತಿಳಿಸಿದ್ದಾರೆ.
ಆಸ್ಪತ್ರೆಯ ಮೂವರು ನಿವಾಸಿ ವೈದ್ಯರು, 14 ವಿದ್ಯಾರ್ಥಿಗಳೂ ಸೋಂಕಿಗೆ ಗುರಿಯಾಗಿದ್ದು, ಅರಿವಳಿಕೆ ವಿಭಾಗದ 20 ವಿದ್ಯಾರ್ಥಿಗಳು, 10 ವೈದ್ಯರು, 12 ಅಧ್ಯಾಪಕರು ಕೋವಿಡ್ ಗೆ ತುತ್ತಾಗಿದ್ದಾರೆ. ಹಾಗಾಗಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ ಎಂದರು.
ಆದರೆ ತುರ್ತು ಪರಿಸ್ಥಿತಿ, ಪ್ರಸೂತಿಗಳಂತ ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆಗೆ ಲಭ್ಯವಿರುವ ವೈದ್ಯರಿಂದ ಈ ಸೇವೆ ಮಾಡಿಸುತ್ತಿದ್ದೇವೆ ಎಂದರು.