ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಚರ್ಚಿತ ಗ್ಯಾನವಾಪಿ ಮಸೀದಿಯ ಸರ್ವೇಕ್ಷಣೆಯು ಪ್ರಾರಂಭವಾಗಿದ್ದು ಇಂದು ಮುಂಜಾನೆ ಯಾವುದೇ ಅಡೆತಡೆಗಳಿಲ್ಲದೇ ಸರ್ವೇ ನಡೆಯುತ್ತಿದೆ ಎಂದು ವರದಿಯಾಗಿದೆ.
ನ್ಯಾಯಾಲಯದಿಂದ ನೇಮಿಸಲ್ಪಟ್ಟ ಎರಡನೇ ಸಮಿತಿಯ ಉಪಸ್ಥಿತಿಯಲ್ಲಿ ಗ್ಯಾನವಾಪಿ ಮತ್ತು ಶೃಂಗಾರ ಗೌರಿ ಸಂಕೀರ್ಣದ ಎರಡು ನೆಲಮಾಳಿಗೆಗಳ ಸರ್ವೇ ಕಾರ್ಯ ಮತ್ತು ವೀಡಿಯೋಗ್ರಫಿ ಪೂರ್ಣಗೊಂಡಿದೆ. ನೆಲಮಾಳಿಗೆಯಲ್ಲಿದ್ದ ಕೊಠಡಿಗಳ ಪೈಕಿ ಮೂರು ಕೊಠಡಿಗಳು ಮಸೀದಿಯ ಅಡಿಯಲ್ಲಿದ್ದು ಬಾಗಿಲುಗಳಿಗೆ ಬೀಗ ಹಾಕಲಾಗಿತ್ತು. ಆದರೆ ಸರ್ವೇ ಸಂದರ್ಭದಲ್ಲಿ ಮಸೀದಿಯ ಆಡಳಿತ ಮಂಡಳಿಯು ಬೀಗವನ್ನು ತೆಗೆದು ಸರ್ವೆಗೆ ಅವಕಾಶ ಮಾಡಿಕೊಟ್ಟಿದೆ. ಇನ್ನು ನಾಲ್ಕನೇ ಕೋಣೆಯು ಹಿಂದುಗಳಿಗೆ ಸೇರಿದ್ದಾಗಿದ್ದು ಅದಕ್ಕೆ ಯಾವುದೇ ಬಾಗಿಲುಗಳಿರಲಿಲ್ಲ. ಆದ್ದರಿಂಧ ಸರ್ವೇ ಕಾರ್ಯವು ಸುಸೂತ್ರವಾಗಿ ನಡೆಯುತ್ತಿದೆ ಎಂದು ವರದಿಯಾಗಿದೆ.
ಈ ಹಿಂದೆ ನ್ಯಾಯಲಯವು ಕೀಲಿಯು ಲಭ್ಯವಿಲ್ಲದಿದ್ದರೆ ಬೀಗಗಳನ್ನು ಮುರಿಯುವಂತೆ ಹಾಗೂ ಅಡ್ಡಿಪಡಿಸಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಸೀದಿಯ ಆಡಳಿತ ಮಂಡಳಿಯು ಸರ್ವೇ ಸಮಿತಿಯೊಂದಿಗೆ ಸಹಕರಿಸುವುದಾಗಿ ಹೇಳಿತ್ತು. ಪ್ರಸ್ತುತ ಸರ್ವೇ ಕಾರ್ಯವು ನಡೆಯುತ್ತಿದ್ದು ಮೇ 17ರಂದು ವರದಿ ಸಲ್ಲಿಕೆಯಾಗಲಿದೆ.