ಹೊಸ ದಿಗಂತ ವರದಿ, ಗದಗ
ನಗರಸಭೆಯಲ್ಲಿ ಪಾರ್ಮ ನಂ.3 ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ನಗರಸಭೆಯ ಕಂದಾಯ ಅಧಿಕಾರಿ ಮಹೇಶ ಹಡಪದ ಅವರು ನಗರಾಭಿವೃದ್ದಿ ಪ್ರಾಧಿಕಾರ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆಯದೆ 979 ವಸತಿ ವಿನ್ಯಾಸದಲ್ಲಿ ಮತ್ತು ಇನ್ನೂಳಿದ ಬೇರೆ ಬೇರೆ ನಿವೇಶನಗಳು ಸೇರಿ ಒಟ್ಟು 1063 ಪ್ರಕರಣಗಳಲ್ಲಿ ಪಾರ್ಮ ನಂ. 3 ರನ್ನು ನೀಡಿರುವುದು ಕಂಡು ಬಂದ ಹಿನ್ನಲೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಕಂದಾಯ ಅಧಿಕಾರಿ ಮಹೇಶ ಹಡಪದ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದರು.
ಆದರೆ, ಆಶ್ಚರ್ಯವೆಂಬಂತೆ ರಾಜ್ಯ ಸರಕಾರದ ಸಚಿವಾಲಯ ಆ.8 ರಂದು ಮಹೇಶ ಹಡಪದ ಅವರನ್ನು ಕೆರೂರಿನ ಪ.ಪಂ.ನ ಮುಖ್ಯಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ನೀಡಿರುವುದು ಜನತೆಯು ಹುಬ್ಬೆರಿಸುವಂತೆ ಮಾಡಿದೆ. ಸಾಮಾನ್ಯ ಜನರು ಪಾರ್ಮ ನಂ.3ರನ್ನು ಪಡೆಯಲು ಹರಸಾಹಸ ಪಡುತ್ತಿರುವ ಸಂದರ್ಭ ಅದನ್ನು ಸರಳಿಕರಣಗೊಳಿಸುವು ದನ್ನು ಬಿಟ್ಟು ಕರ್ತವ್ಯಲೋಪ ಎಸಗಿದ ಅಧಿಕಾರಿಗೆ ಶಿಕ್ಷೆ ನೀಡದೆ ಅವರಿಗೆ ಹೆಚ್ಚಿನ ಸ್ಥಾನ ನೀಡಿದ್ದಕ್ಕೆ ಸರಕಾರ ಭ್ರಷ್ಟಾಚಾರಕ್ಕೆ ಮನ್ನಣೆ ನೀಡುತ್ತಿದೆ ಎನ್ನುವ ಜನರ ಭಾವನೆಗೆ ಪುಷ್ಟಿ ನೀಡಿದಂತಾಗಿದೆ.