ಹೊಸದಿಗಂತ ಡಿಜಿಟಲ್ ಡೆಸ್ಕ್
ಏಷ್ಯನ್ ಚಾಂಪಿಯನ್ ಶ್ರೀಲಂಕಾಕ್ಕೆ ಟಿ 20 ವಿಶ್ವಕಪ್ ನಲ್ಲಿ ಕಂಠಕದ ಮೇಲೆ ಕಂಠಕಗಳು ಕಾಡಲಾರಭಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ಹೀನಾಯ ಸೋಲುಂಡ ಲಂಕಾ, ಇನ್ನೊಂದು ಪಂದ್ಯ ಸೋತರೂ ಅರ್ಹತಾ ಸುತ್ತಿನಿಂದಲೇ ಹೊರಬೀಳುವ ಭೀತಿಯಲ್ಲಿದೆ. ಈ ನಡುವೆ ತಂಡದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದ ಸ್ಟಾರ್ ವೇಗಿ ಇದೀಗ ಟೂರ್ನಿಯಿಂದಲೇ ಔಟ್ ಆಗಿದ್ದು, ಲಂಕಾ ಮತ್ತೊಂದು ಆಘಾತಕ್ಕೆ ತುತ್ತಾಗಿದೆ.
ತಂಡದ ಘಾತಕ ವೇಗಿ ದುಷ್ಮಂತ ಚಮೀರಾ ಗಾಯದ ಕಾರಣ ವಿಶ್ವಕಪ್ ನಿಂದ ಹೊರಬಿದ್ದಿದ್ದಾರೆ. ಬಲಗೈ ವೇಗಿಯ ಕಾಲಿಗೆ ಗಾಯವಾಗಿದ್ದು, ಈ ಕಾರಣದಿಂದಾಗಿ ಅವರು ವಿಶ್ವಕಪ್ ಕಳೆದುಕೊಳ್ಳಲಿದ್ದಾರೆ.
ಈ ಹಿಂದೆ, ಚಮೀರಾ ಗಾಯದ ಸಮಸ್ಯೆಯಿಂದಾಗಿ 2022 ರ ಏಷ್ಯಾ ಕಪ್ ಅನ್ನು ಕಳೆದುಕೊಂಡಿದ್ದರು. ಆದರೆ ಆ ಬಳಿಕ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರಿಂದ ಶ್ರೀಲಂಕಾ ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿತ್ತು.
ಮಂಗಳವಾರ, ಅಕ್ಟೋಬರ್ 18 ರಂದು ಗೀಲಾಂಗ್ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಶ್ರೀಲಂಕಾದ ದೊಡ್ಡ ಗೆಲುವಿನಲ್ಲಿ ಬಲಗೈ ವೇಗಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಯುಎಇ ಇನ್ನಿಂಗ್ಸ್ನ ಪ್ರಮುಖ ಮೂರು ವಿಕೆಟ್ಗಳನ್ನು (15ಕ್ಕೆ 3) ಕಬಳಿಸುವ ಮೂಲಕ ಶ್ರೀಲಂಕಾವನ್ನು ಟೂರ್ನಿಯಲ್ಲಿ ಜೀವಂತವಾಗಿಸಿದ್ದರು. 30 ವರ್ಷ ಆಟಗಾರ ಚಮೀರ ತಮ್ಮ ಸ್ಪೆಲ್ನ ಕೊನೆಯ ಓವರ್ನಲ್ಲಿ ಗಾಯಗೊಂಡಿದ್ದರು. ಮತ್ತು ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯುವಾಗ ನೋವು ತೀವ್ರವಾಗಿ ಬಾಧಿಸುತ್ತಿದ್ದುದು ಅವರ ಮುಖದಲ್ಲಿ ಗೋಚರಿಸುತ್ತಿತ್ತು.
ಈಗಾಗಲೇ ತಂಡದ ಪ್ರಮುಖ ಆಟಗಾರರಾದ ದನುಷ್ಕ ಗುಣತಿಲಕ ಮತ್ತು ಪ್ರಮೋದ್ ಮಧುಶನ್ ಅವರು ಮಂಡಿರಜ್ಜು ಗಾಯಕ್ಕೊಳಗಾಗಿದ್ದು ಟೂರ್ನಿಯಿಖದ ಹೊರಬೀಳುವ ಆತಂಕದಲ್ಲಿದ್ದಾರೆ. ಈ ನಡುವೆ ಚಮೀರ ಗಾಯ ಶ್ರೀಲಂಕಾ ಗಾಯದ ಮೇಲೆ ಬರೆ ಎಳೆದಂತಾಗಿದೆ. ಏತನ್ಮಧ್ಯೆ, ಶ್ರೀಲಂಕಾದ ವೈದ್ಯಕೀಯ ತಂಡವು ಗುರುವಾರ ನಡೆಯಲಿರುವ ನೆದರ್ಲ್ಯಾಂಡ್ಸ್ ವಿರುದ್ಧದ ಡು- ಆರ್ -ಡೈ ಪಂದ್ಯಕ್ಕೆ ಮುಂಚಿತವಾಗಿ ಮಧುಶನ್ ಚೇತರಿಸಿಕೊಳ್ಳುವ ಭರವಸೆಯನ್ನು ಹೊಂದಿದೆ.