ಹೊಸದಿಗಂತ ವರದಿ ಹಾಸನ :
ನಗರದ ಬಿ.ಕಾಟಿಹಳ್ಳಿ ಬಳಿ ಮಂಗಳವಾರ ಬೈಕ್ಗೆ ಟ್ಯಾಂಟರ್ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಮೃತರಾದರು.
ವಕೀಲ ಸತೀಶ್ (೪೨), ಕಮಲಮ್ಮ (೭೧) ಮೃತರು. ಇಬ್ಬರೂ ಬೈಕ್ನಲ್ಲಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿಯಾಯಿತು. ಡಿಕ್ಕಿ ರಭಸಕ್ಕೆ ಇಬ್ಬರೂ ನೆಲಕ್ಕೆ ಅಪ್ಪಳಿಸಿ ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದರು. ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಟ್ಯಾಂಕರ್ ಹಾಗೂ ಸ್ಥಳದಲ್ಲಿ ನಿಲ್ಲಿಸಿದ್ದ ಮೂರು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಮಾಡಿದರು.
ಶಾಲೆಗೂ ಮುತ್ತಿಗೆ: ಅಪಘಾತದ ಸ್ಥಳಕ್ಕೆ ಸಮೀಪದಲ್ಲೆ ಖಾಸಗಿ ಶಾಲೆಯಿದ್ದು ಪ್ರತಿನಿತ್ಯ ಟರ್ಕ್ ಹಾಗೂ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲಿಸುತ್ತಿದ್ದರು, ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಪೋಲಿಸರ ಗಮನಕ್ಕೆ ತಂದಿಲ್ಲ ಎಂದು ಮುತ್ತಿಗೆಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಅಪಘಾತಕ್ಕೆ ಕಾರಣವಾದ ಟ್ಯಾಂಕರ್ ಲಾರಿ ಸಹ ಪಲ್ಟಿಯಾಗಿದ್ದು ಅದರ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿನೀಡಿ ಪರಿಶಿಲಿಸಿದ್ದು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಉದ್ರಿಕ್ತ ಗುಂಪನ್ನು ಪೋಲಿಸರು ಚದುರಿಸಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಹಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಕರಣ ದಾಖಲಾಗಿದೆ.