ಟಾಟಾ ಮಾರ್ಕೊಪೋಲೋ ಮೋಟಾರ್ ಸಂಸ್ಥೆ- ಕಾರ್ಮಿಕರ ನಡುವಿನ ಬಿಕ್ಕಟ್ಟು ಇತ್ಯರ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ರಾಜ್ಯ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದ್ದ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ
ಟಾಟಾ ಮೋಟಾರ್ ಕಂಪನಿಯ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳು ಸಮ್ಮತಿಸಿವೆ.
ಸೋಮವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್.ನಿರಾಣಿ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಜನಪ್ರತಿನಿಗಳು, ಟಾಟಾ ಮೋಟಾರ್ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಯ ಪ್ರಮುಖರ ಜೊತೆ ನಡೆದ ಸಭೆಯಲ್ಲಿ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕೆಂಬ ಸಚಿವ ಮುರುಗೇಶ್ ನಿರಾಣಿ ಅವರ ಪ್ರಸ್ತಾವನೆಯನ್ನು ಸಭೆಯಲ್ಲಿದ್ದ ಎಲ್ಲರೂ ಸರ್ವಸಮ್ಮತದಿಂದ ಒಪ್ಪಿದ್ದಾರೆ.
ಕೈಗಾರಿಕೆಗಳು ಉಳಿಯಬೇಕು, ಜೊತೆಗೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಹಿತ ಕಾಯುವುದು ಸರ್ಕಾರದ ಉದ್ದೇಶ ಇದರಲ್ಲಿ ಯಾರಿಗೂ ಕೂಡ ಪ್ರತಿಷ್ಠೆ ಬೇಡ, ಎದುರಾಗಿರುವ ಸಮಸ್ಯೆಯನ್ನು ಒಟ್ಟಾಗಿ ಕುಳಿತು ಪರಿಹರಿಸಿಕೊಳ್ಳಬೇಕು ಎಂದು ನಿರಾಣಿ ಸಲಹೆ ನೀಡಿದರು.
ಟಾಟಾ ಕಂಪೆನಿ ದೇಶದ ಆಸ್ತಿ. ಇಲ್ಲಿ ಲಾಭ, ನಷ್ಟಕ್ಕಿಂತ ಕಾರ್ಮಿಕರ ಹಿತ ಹಾಗೂ ಆಡಳಿತ ಮಂಡಳಿ ಎರಡೂ ಮುಖ್ಯ. ಪದೇ ಪದೇ ಪ್ರತಿಷ್ಠೆಯನ್ನೇ ಮುಂದಿಟ್ಟುಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ, ಯಾರೂ ಕೂಡ ಪ್ರತಿಷ್ಠೆಗೆ ಹೋಗದೆ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು ಎಂದು ಸೂಚಿಸಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು, ನಮಗೆ ಆಡಳಿತ ಮಂಡಳಿ ಬೇರೆ ಅಲ್ಲ , ಕಾರ್ಮಿಕರು ಬೇರೆ ಅಲ್ಲ. ಇವರಿಬ್ಬರು ಒಂದೇ ನಾಣ್ಯದ ಎರಡು ಮುಖಗಳು. ಅದರಲ್ಲೂ ಟಾಟಾ ಕಂಪೆನಿಯೆಂದರೆ ಅದು ದೇಶದ ಆಸ್ತಿ. ಯಾರೂ ಕೂಡ ಇದನ್ನು ವೈಯಕ್ತಿಕ ಮಟ್ಟಕ್ಕೆ ತೆಗೆದುಕೊಳ್ಳಬಾರದು ಎಂದು ಆಡಳಿತ ಮಂಡಳಿ ಮತ್ತು ಕಾರ್ಮಿಕರಿಗೆ ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ಅಮೃತ್ ದೇಸಾಯಿ, ಅರವಿಂದ್ ಬೆಲ್ಲದ್, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂಪಾಷಾ, ಕಾರ್ಯದರ್ಶಿ ಮನೋಜ್ ಜೈನ್ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!