ರಾಜಸ್ಥಾನದಲ್ಲೂ ಶ್ರದ್ಧಾ ಮಾದರಿ ಭೀಕರ ಹತ್ಯೆ: ಚಿಕ್ಕಮ್ಮನನ್ನೇ ಕೊಂದು 10 ತುಂಡುಗಳಾಗಿ ಕತ್ತರಿಸಿದ ಪಾಪಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ಶ್ರದ್ಧಾ ವಾಕರ್ ಭೀಕರ ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಇದೀಗ ಇಂತಹ ಘಟನೆ ರಾಜಸ್ಥಾನದ ಜೈಪುರದಿಂದ ಬೆಳಕಿಗೆ ಬಂದಿದೆ.

ಇಲ್ಲಿ ಸೋದರಳಿಯನೊಬ್ಬ ತನ್ನ ವಿಧವೆ ಚಿಕ್ಕಮ್ಮನನ್ನು ಕೊಂದು ಅವರ ದೇಹವನ್ನು ಮಾರ್ಬಲ್ ಕಟರ್ ಯಂತ್ರದಿಂದ 10 ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ.

ಡಿಸೆಂಬರ್ 11 ರಂದು, ಜೈಪುರದ ಅನುಜ್ ಎಂಬಾತ ತನ್ನ ಚಿಕ್ಕಮ್ಮ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದು, ಆತನ ಹೇಳಿಕೆಗಳಲ್ಲಿ ಗೊಂದಲ ಕಂಡ ಹಿನ್ನೆಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆಯಲ್ಲಿ, ಆತನೇ ತನ್ನ ಚಿಕ್ಕಮ್ಮನನ್ನು ಸುತ್ತಿಗೆಯಿಂದ ಕೊಂದು ಚಾಕು ಮತ್ತು ಮಾರ್ಬಲ್ ಕಟ್ಟರ್ ಬಳಸಿ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಗೊತ್ತಾಗಿದೆ.

ಪೊಲೀಸರು ಆರೋಪಿ ಅನುಜ್ ಶರ್ಮಾ ಅಲಿಯಾಸ್ ಅಚಿಂತ್ಯ ಗೋವಿಂದ್‌ ದಾಸ್‌ನನ್ನು ಬಂಧಿಸಿದ್ದಾರೆ. ಹೆದ್ದಾರಿ ಬದಿಯಲ್ಲಿ, ಕಾಡಿನಲ್ಲಿ ಕೆಲವು ದೇಹದ ಭಾಗಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಆದ್ರೆ ಮಹಿಳೆಯ ದೇಹದ ಇತರ ಭಾಗಗಳಿಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ.

ಆತ ಅನುಮಾನದಿಂದ ಪಾರಾಗಲು ಠಾಣೆಗೆ ಆಗಮಿಸಿ ಚಿಕ್ಕಮ್ಮನ ನಾಪತ್ತೆ ದೂರು ದಾಖಲಿಸಿದ್ದಾನೆ. ಅಡುಗೆ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆಯುತ್ತಿದ್ದಾಗ ಅನುಜ್ ಸಿಕ್ಕಿಬಿದ್ದಿದ್ದಾನೆ. ನಂತರ ಮೃತರ ಪುತ್ರಿ ಪೂಜಾ ಅನುಜ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಪ್ಯಾರಿಸ್ ದೇಶಮುಖ್ ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಕತ್ತರಿಸಿ ವಿಲೇವಾರಿ ಮಾಡಲು ಸಿಕಾರ್ ರಸ್ತೆಯಲ್ಲಿರುವ ಹಾರ್ಡ್‌ವೇರ್ ಅಂಗಡಿಯಿಂದ ಮಾರ್ಬಲ್ ಕಟ್ಟರ್ ಯಂತ್ರವನ್ನು ತಂದಿದ್ದ ಆತ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಸೂಟ್‌ಕೇಸ್ ಮತ್ತು ಬಕೆಟ್‌ನಲ್ಲಿ ತುಂಬಿ ಕಾಡಿನಲ್ಲಿ ದೆಹಲಿ ರಸ್ತೆಯ ಕಡೆಗೆ ಎಸೆದಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!