ಹೊಸದಿಗಂತ ವರದಿ, ಮಂಡ್ಯ :
ಮೇಲುಕೋಟೆ ಶ್ರೀ ಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದ ಶಿಕ್ಷಕಿ ದೀಪಿಕಾ ಕೊಲೆಯ ಸುಳಿವನ್ನು ಪ್ರವಾಸಿಗರು ಸೆರೆಹಿಡಿದ 13 ಸೆಕೆಂಡ್ಗಳ ವೀಡಿಯೋ ನೀಡಿದೆ. ದೀಪಿಕಾಗೆ ಮನಸೋ ಇಚ್ಛೆ ಥಳಿಸುತ್ತಿರುವ ವೀಡಿಯೋ ಆರೋಪಿಯನ್ನು ಪತ್ತೆ ಹಚ್ಚಲು ಸಹಕರಿಸಿದೆ.
ಪಾಂಡವಪುರ ತಾಲೂಕು ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ ಹತ್ಯೆಯಾದ ಶಿಕ್ಷಕಿ. ಬಹಿರಂಗಗೊಂಡಿರುವ ವೀಡಿಯೋದಲ್ಲಿರುವುದು ಅದೇ ಗ್ರಾಮದ ಯುವಕ ನಿತೀಶ್ ಎಂದು ಗುರುತಿಸಲಾಗಿದೆ. ಈತನೇ ದೀಪಿಕಾಳನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೇಲುಕೋಟೆಯ ಎಸ್ಇಟಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ದೀಪಿಕಾ ನಿತ್ಯವೂ ತಮ್ಮ ಸ್ಕೂಟರ್ನಲ್ಲೇ ಬಂದು ಹೋಗುತ್ತಿದ್ದರು. ಜ.20ರಂದು ದೀಪಿಕಾ ಎಂದಿನಂತೆ ಶಾಲೆಗೆ ಸ್ಕೂಟರ್ನಲ್ಲಿ ಆಗಮಿಸಿದ್ದರು. ಶಾಲೆಯ ಕರ್ತವ್ಯ ಮುಗಿಸಿ ಮಧ್ಯಾಹ್ನ 12 ಗಂಟೆಗೆ ಯಾರದೋ ಫೋನ್ ಕಾಲ್ ಬಂದಿದ್ದರಿಂದ ಆಕೆ ಶಾಲೆಯಿಂದ ನಿರ್ಗಮಿಸಿದ್ದರು. ಆನಂತರದಲ್ಲಿ ಅವರು ನಾಪತ್ತೆಯಾಗಿದ್ದರು ಎಂದು ಹೇಳಲಾಗಿದೆ.
ದೀಪಿಕಾ ನಾಪತ್ತೆಯಾಗಿರುವ ಬಗ್ಗೆ ಜ.20ರಂದೇ ಕುಟುಂಬದವರು ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾಕತಾಳೀಯವೆಂಬಂತೆ ಅಂದೇ ಪ್ರವಾಸಿಗರು ಬೆಟ್ಟದ ಮೇಲಿನಿಂದ ಯುವಕ-ಯುವತಿ ಹೊಡೆದಾಡುವ ವೀಡಿಯೋವನ್ನು ಸೆರೆಹಿಡಿದಿದ್ದರು. ಅದನ್ನು ಪೊಲೀಸರಿಗೂ ಒಪ್ಪಿಸಿದ್ದರು. ಅದರ ಜಾಡು ಹಿಡಿದು ಹೋದವರಿಗೆ ಸಿಕ್ಕಿದ್ದು ದೀಪಿಕಾರವರ ಸ್ಕೂಟರ್ ಮಾತ್ರ. ಸ್ಕೂಟರ್ ಸಿಕ್ಕಿದ ನಂತರವೂ ಪೊಲೀಸರು ದೀಪಿಕಾ ಪತ್ತೆಗೆ ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪಗಳು ಕೇಳಿಬಂದಿವೆ.