ಹೊಸದಿಗಂತ ವರದಿ,ಕಾರವಾರ:
ಸಾರಿಗೆ ಸಂಸ್ಥೆಯ ಬಸ್ ಅಡ್ಡಗಟ್ಟಿ ಪುಂಡಾಟಿಕೆ ತೋರಿದ ವ್ಯಕ್ತಿಯೋರ್ವ ಬಸ್ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಶಿರವಾಡದ ಜಾಂಬಾ ಕ್ರಾಸ್ ಬಳಿ ನಡೆದಿದ್ದು ಹಲ್ಲೆಯಿಂದಾಗಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಶಿರವಾಡದ ನಿವಾಸಿ ಸುಭಾಷ ಬಾಡಕರ್ ಎಂಬಾತನೇ ಗೂಂಡಾ ವರ್ತನೆ ತೋರಿದ ವ್ಯಕ್ತಿಯಾಗಿದ್ದು ಈತ ಕಾರವಾರದಿಂದ ಸಿದ್ಧರಕ್ಕೆ ತೆರಳುತ್ತಿದ್ದ ಬಸ್ಸಿನ ಎದುರು ಬಸ್ ಸಾಗಲು ತೊಂದರೆ ಆಗುವಂತೆ ಬೈಕ್ ಚಲಾಯಿಸಿ ಬಂದು ಜಾಂಬಾ ಕ್ರಾಸ್ ಬಳಿ ಬಸ್ಸಿಗೆ ಬೈಕ್ ಅಡ್ಡ ಹಾಕಿ ನಿಂತಿದ್ದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ದಾರಿ ಬಿಡುವಂತೆ ಹೇಳಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.
ಇದನ್ನು ವಿಚಾರಿಸಲು ಹೋದ ಬಸ್ ಚಾಲಕ ಮತ್ತು ನಿರ್ವಾಹಕರ ಶರ್ಟ್ ಹಿಡಿದು ಅವರ ಮೇಲೆ ಸಹ ಸುಭಾಷ ಬಾಡಕರ್ ಹಲ್ಲೆ ನಡೆಸಿದ್ದು ಬಸ್ ಚಾಲಕ ಮಹಮ್ಮದ್ ಇಸಾಕ್(28) ಎಂಬಾತನ ತಲೆಗೆ ಹಲ್ಲೆಯಿಂದಾಗಿ ಗಂಭೀರ ಗಾಯಗಳಾಗಿದ್ದು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.