ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಇಂದು ಸಂಭ್ರಮದ ಬಣ್ಣಗಳ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಎಲ್ಲರೂ ಕೂಡಿ ಆಡಿ ಸಂತಸದಿಂದ ಒಬ್ಬರ ಮೇಲೊಬ್ಬರು ಬಣ್ಣ ಎರಚಿ ನಲಿಯುವ ಹಬ್ಬ ಇದಾಗಿದೆ. ಇಲ್ಲಿ ಹಿರಿಯರು ಕಿರಿಯರು ಅನ್ನೋ ಬೇಧವಿಲ್ಲದೆ ಹಬ್ಬ ಮಾಡಲಾಗುತ್ತದೆ.
ಈ ಹಿಂದೆ ಎಲ್ಲೆಡೆ ಹೋಳಿ ಸಂಭ್ರಮ ಇರುತ್ತಿತ್ತು. ಆದರೆ ಉತ್ತರ ಭಾರತದಲ್ಲಿ ಹೋಳಿ ಆಚರಣೆ ಜೋರಾಗಿತ್ತು. ಇದೀಗ ಎಲ್ಲೆಡೆ ಹೋಳಿ ಎಂದರೆ ಮೋಜು ಮಸ್ತಿಯ ಆಚರಣೆ ಆಗಿದೆ. ಪುಟಾಣಿ ಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳು ಕೂಡ ಹೋಳಿ ಆಡುತ್ತಾರೆ.
ಈ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಅಭಾವ ಇರುವ ಕಾರಣ, ಕೆಲವರು ಮಾತ್ರ ಆಚರಣೆಯಲ್ಲಿ ತೊಡಗಿದ್ದಾರೆ.
ಈ ಆಚರಣೆ ಹಿನ್ನೆಲೆ ಏನು?
ತಾರಕಾಸುರನೆಂಬ ರಾಕ್ಷಸನು ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿ, ತನಗೆ ಸಾವು ಬಾರದಂತೆ ಅನುಗೃಹಿಸು ಅಂತ ವರ ಬೇಡುತ್ತಾನೆ. ಅದಕ್ಕೆ ಬ್ರಹ್ಮ ಸಾವು ಎಲ್ಲರಿಗೂ ನಿಶ್ಚಿತ. ಸಾವು ಬಾರದಂತೆ ತಡೆಯಲು ಸಾಧ್ಯವಿಲ್ಲ ಅಂತ ಹೇಳುತ್ತಾನೆ. ಆಗ ತಾರಕಾಸುರನು ಶಿವನಿಗೆ ಏಳು ದಿನದಲ್ಲಿ ಜನಿಸಿದ ಮಗನಿಂದಲೇ ನನಗೆ ಸಾವು ಬರುವಂತೆ ಮಾಡು ಎಂದು ವರ ಬೇಡುತ್ತಾನೆ. ಅದಕ್ಕೆ ಬ್ರಹ್ಮ ಒಪ್ಪಿ ವರ ನೀಡುತ್ತಾನೆ.
ಬ್ರಹ್ಮನಿಂದ ವರ ಪಡೆದ ತಾರಕಾಸುರ ಅಹಂಕಾರದಿಂದ ಲೋಕದೆಲ್ಲಡೆ ಉಪಟಳ ನೀಡುತ್ತಿರುತ್ತಾನೆ. ಇವನ ಕಾಟಕ್ಕೆ ಸುಸ್ತಾದ ದೇವತೆಗಳೆಲ್ಲ ಸಹಾಯ ಕೋರಿ ಶಿವನಲ್ಲಿಗೆ ಹೋಗುತ್ತಾರೆ. ಆಗ ಶಿವನು ಭೋಗಸಮಾಧಿಯಲ್ಲಿ ತಪಸ್ಸು ಮಾಡ್ತಿರುತ್ತಾನೆ. ಶಿವ ಭೋಗಸಮಾಧಿಯಿಂದ ಎದ್ದು ಪಾರ್ವತಿ ಜೊತೆ ಮೋಹಗೊಂಡು ಸೇರುವಂತೆ ಮಾಡಲು ದೇವತೆಗಳೆಲ್ಲರೂ ಸೇರಿ ರತಿ ಮನ್ಮಥರನ್ನು ಒಪ್ಪಿಸುತ್ತಾರೆ.
ಈ ಪುಣ್ಯಕಾರ್ಯ ಮಾಡಲು ರತಿ ಮನ್ಮಥರು ಒಪ್ಪುತ್ತಾರೆ. ಅದರಂತೆ ತರಿ-ಮನ್ಮಥರು ಧ್ಯಾನಸ್ಥ ಸ್ಥಿತಿಯಲ್ಲಿದ್ದ ಮಹಾದೇವನ ಎದುರು ನೃತ್ಯ ಮಾಡಿ, ಹೂವಿನ ಬಾಣ ಬಿಟ್ಟು ಶಿವನ ಧ್ಯಾನಕ್ಕೆ ಭಂಗ ತರುತ್ತಾರೆ. ಇದರಿಂದ ಕುಪಿತಗೊಂಡ ಶಿವ, ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟುಬಿಡುತ್ತಾನೆ. ನಂತರ ರತಿ ಪತಿ ಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥ ಕಾಣುವಂತೆ ವರ ನೀಡುತ್ತಾನೆ.ಈ ಮನ್ಮಥನಿಗೆ ಕಾಮ ಎಂಬ ಹೆಸರೂ ಕೂಡ ಇದೆ. ಹೀಗಾಗಿ ಕಾಮ ಶಿವನ ಕೆಂಗಣ್ಣಿಗೆ ಗುರಿಯಾಗಿ ಸುಟ್ಟು ಹೋದ ದಿನವನ್ನು ಕಾಮನ ಹಬ್ಬವಾಗಿ ಆಚರಿಸುತ್ತಾರೆ. ಈ ಕಾಮನ ಹಬ್ಬದ ದಿನದಂದೇ ಹೋಳಿ ಹಬ್ಬ ಆಚರಿಸಲಾಗುತ್ತೆ.