ಹೊಸದಿಗಂತ ವರದಿ ಹುಬ್ಬಳ್ಳಿ:
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಭ್ರಷ್ಟಾಚಾರ, ವಂಚನೆ ಹೆಚ್ಚು ಕೇಳಿ ಬರುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ತೊಡೆದು ಹಾಕಿ ದೇಶದ ಅಭಿವೃದ್ಧಿ, ಭದ್ರತೆ ಹಾಗೂ ಆರ್ಥಿಕತೆಯನ್ನಯ ಬಲಿಷ್ಠಗೊಳಿಸಿದ್ದಾರೆಂದು ಕೇಂದ್ರ ಕೌಶಲ್ಯ ಅಭಿವೃದ್ಧಿ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ ಚಂದ್ರಶೇಖರ ಹೇಳಿದರು.
ನಗರದ ಚಾಲುಕ್ಯ ರೈಲ್ವೆ ಭವನದಲ್ಲಿ ಏರ್ಪಡಿಸಿದ್ದ ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ಮೋದಿ ಪ್ರಧಾನಿಯಾದ ಮೇಲೆ ದೇಶದ ಭದ್ರತೆ ಹಾಗೂ ಆರ್ಥಿಕತೆಯ ಹಲವಾರು ಸವಾಲುಗಳಿದ್ದವು. ಅವುಗಳನ್ನು ಕಳೆದ 9 ವರ್ಷದಲ್ಲಿ ಸೂಕ್ತವಾಗಿ ಎದುರಿಸಿ ದೇಶ ಅಭಿವೃದ್ಧಿಗೊಳ್ಳುವಂತೆ ಮಾಡಿದ್ದಾರೆ ಎಂದರು.
ದೇಶದಲ್ಲಿ ಮಾದರಿ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ, ಗುಣಮಟ್ಟದ ಶಿಕ್ಷಣ ಬಗ್ಗೆ ಮಾತನಾಡುವಂತಾಗಿದೆ. 2014r ಪೂರ್ವದಲ್ಲಿ ಸಾಕಷ್ಟು ಜನರು ಶಿಕ್ಷಣ ಹಾಗೂ ಕೌಶಲ್ಯದಿಂದ ವಂಚಿತರಾಗಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸ್ಕಿಲಿಂಗ್ ಇಂಡಿಯಾದಂತ ಹಲವಾರು ಯೋಜನೆಗಳನ್ನು ಕೋಟ್ಯಾಂತರ ಜನರು ಸದುಪಯೋಗ ಪಡೆದುಕೊಳ್ಳುವಂತಾಗಿದೆ.
ಪ್ರಧಾನಿ ಮೋದಿ ಅವರು ರಾಜಕೀಯ ವ್ಯವಸ್ಥೆಯನ್ನು ಸೇವೆಯಾಗಿ ಬದಲಾಯಿಸಿದ್ದಾರೆ. ರಾಜಕಾರಣಿಗಳು ತಮ್ಮ ಜನ್ಮದಿನವನ್ನು ವೈಭವದಿಂದ ಆಚರಿಸಿಕೊಳ್ಳುವುದು ನೋಡಿದ್ದೇವೆ. ಆದರೆ ಪ್ರಧಾನಿ ಮೋದಿ ಅವರು ದೇಶದ ಬಡವರ ಪರವಾದ ಯೋಜನೆ ಜಾರಿಗೆ ತಂದು ಆಚರಿಸಿಕೊಳ್ಳುವುದು ವಿಶೇಷ ಎಂದು ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಶ್ವಕರ್ಮರು ನಾಡಿನಲ್ಲಿ ಶ್ರೇಷ್ಠವಾದ ಕೆಲಸ ಮಾಡುತ್ತಾರೆ. ಇವರ ಸಹಕಾರ ಎಲ್ಲರಿಗೂ ಬೇಕು. ಸ್ವಾತಂತ್ರ್ಯ ಕಳೆದು 75 ವರ್ಷವಾದರೂ ವಿಶ್ವಕರ್ಮ ಯಾರು ಗುರುತಿಸಿಲ್ಲದಾಗಿತ್ತು. ಈಗ ಕೇಂದ್ರ ಸರ್ಕಾರ ಅವರ ಹೆಸರಿನಲ್ಲಿ ಉತ್ತಮ ಯೋಜನೆ ತರುವು ಮೂಲಕ ವಿಶ್ವಕರ್ಮ ಮಹತ್ವ ಸಾರುತ್ತಿದೆ ಎಂದು ತಿಳಿಸಿದರು.