ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿರುಸಿನ ಮತದಾನ ನಡೆಯುತ್ತಿದ್ದು, ನಟ ಉಪೇಂದ್ರ (Upendra) ಅವರು ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಬೇಕು ಎಂಬುದು ಎಲ್ಲರ ಆಶಯ. ಆದರೆ ಕೆಲವರು ಓಟ್ ಮಾಡುವುದಿಲ್ಲ. ಕಡ್ಡಾಯ ಮತದಾನ ಎಂಬ ಕಾನೂನು ತರಬೇಕು ಎಂಬ ಅನಿಸಿಕೆ ಕೆಲವರದ್ದು. ಆದರೆ ಆ ರೀತಿ ಒತ್ತಾಯ ಮಾಡಿದರೆ ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರ (Dictatorship) ಆಗುತ್ತದೆ ಎಂದು ಉಪೇಂದ್ರ ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಕೆಲವರಿಗೆ ಈ ವ್ಯವಸ್ಥೆಯೇ ಸರಿ ಇಲ್ಲ ಎನಿಸಬಹುದು. ಅದನ್ನೂ ನಾವು ಒಪ್ಪಿಕೊಳ್ಳಬೇಕು. ಅದಕ್ಕೇ ಪ್ರಜಾಪ್ರಭುತ್ವ ಅನ್ನೋದು. ಪ್ರಭುಗೆ ಹೋಗಿ ನೀನು ಹಿಂಗೇ ಮಾಡು, ಹಂಗೇ ಮಾಡು ಅಂದರೆ ಅದು ಪ್ರಜಾಪ್ರಭುತ್ವ ಅಲ್ಲ, ಸರ್ವಾಧಿಕಾರ ಆಗುತ್ತದೆ. ನೀವು ಖಂಡಿತಾ ಮತ ಹಾಕಲೇಬೇಕು ಅಂತ ಹೇಳೋಕೆ ಆಗಲ್ಲ. ಮತ ಹಾಕಿದರೆ ತುಂಬ ಒಳ್ಳೆಯದು. ಯಾಕೆಂದರೆ, ನೀವು ರಾಜರ ರೀತಿ ಫೀಲ್ ಮಾಡುವ ದಿನ ಇದು. ಈ ಒಂದು ದಿನ ನಿರ್ಲಕ್ಷ್ಯ ಬೇಡ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಪ್ರಭುಗಳು ಅಂತ ಅನಿಸುವುದೇ ಈ ಒಂದು ದಿನ. ಬಹಳ ಮುಖ್ಯವಾದ ದಿನ ಇಂದು. ತುಂಬ ಜನ ಯುವಕರು ಬರುತ್ತಿದ್ದಾರೆ. ಎಲ್ಲರಿಗೂ ಭರವಸೆ ಬಂದಿದೆ. ಮತದಾನದ ಮಹತ್ವ ಎಲ್ಲರಿಗೂ ಗೊತ್ತಾಗುತ್ತಿದೆ. ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ ಎಂದಿದ್ದಾರೆ .