ಹೊಸದಿಗಂತ ಡಿಜಿಟಲ್ ಡೆಸ್ಕ್ :
ಹುಲಿ ಯೋಜನೆಯ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಇಂದು ಪ್ರಧಾನಿ ಮೋದಿ ಭೇಟಿ ಕೊಟ್ಟಿದ್ದರು. ಬಳಿಕ ತಮಿಳುನಾಡಿನ ತೆಪ್ಪಕಾಡಿನ ಆನೆ ಶಿಬಿರಕ್ಕೆ ಭೇಟಿ ನೀಡಿ, ಆಸ್ಕರ್ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರದ ಮುಖ್ಯ ಪಾತ್ರಧಾರಿಗಳಾದ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಭೇಟಿ ಮಾಡಿ, ಅವರನ್ನು ಸನ್ಮಾನಿಸಿದರು. ಬೊಮ್ಮ – ಬೆಳ್ಳಿ ದಂಪತಿಯೊಂದಿಗೆ ಗಜಪಡೆ ಹತ್ತಿರಕ್ಕೆ ಬಂದು ಪ್ರಧಾನಿ ಆನೆಗಳನ್ನು ಸ್ಪರ್ಶಿಸಿದರು.
ಈ ವೇಳೆ ಆನೆ ಶಿಬಿರದಲ್ಲಿ ವಿಹರಿಸಿ ಗಜಪಡೆಗೆ ಕಬ್ಬು ತಿನ್ನಿಸಿದ ಮೋದಿ, ಟಿ23 ಹುಲಿ ಸೆರೆ ಹಿಡಿದ ಮೂವರು ಸಿಬ್ಬಂದಿ ಮತ್ತು ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಯನ್ನೂ ಗೌರವಿಸಿದರು.
ಪ್ರಧಾನಿಯನ್ನು ನೋಡಲು ರಸ್ತೆಯುದ್ದಕ್ಕೂ ಗ್ರಾಮಸ್ಥರು ಸೇರಿದ್ದರು. ಅಲ್ಲಿ ನೆರೆದಿದ್ದ ಜನಸ್ತೋಮದತ್ತ ಕೈ ಬೀಸಿದ ಮೋದಿ ಅಲ್ಲಿಂದ ಹೆಲಿಪ್ಯಾಡ್ಗೆ ಆಗಮಿಸಿದರು.