ಹೊಸ ದಿಗಂತ ವರದಿ,ಬಳ್ಳಾರಿ:
ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿ ವಿಚಾರ ಸದ್ಯ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದರು. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹೇಳಿಕೆ ನೀಡಿದ್ದು ಎಂದು ಹೇಳಲಾಗುತ್ತಿದೆ. ಅವರೋಂದಿಗೆ ಚೆರ್ಚೆ ಮಾಡುವೆ, ಸದ್ಯ ಸರ್ಕಾರದ ಮುಂದೆ ಇಂತಹ ಕಾಯ್ದೆ ಜಾರಿಗೆ ಬಗ್ಗೆ ಪ್ರಸ್ತಾಪವಿಲ್ಲ. ಈ ಕುರಿತು ಸಮಗ್ರ ಚೆರ್ಚಿಸಿ ಮುಂದುವರೆಯಲಾಗುವುದು ಎಂದರು.
ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಕ್ರೀಯೆ ಚುರುಕುಗೊಂಡಿದೆ. ಇದು ಅಂತರಾಜ್ಯ ವಿಚಾರ ಇರುವದರಿಂದ ಸ್ವಲ್ಪ ವಿಳಂಬವಾಗಿದೆ. ನೆರೆಯ ಆಂದ್ರ ಹಾಗೂ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಈ ಕುರಿತು ನಿರ್ಣಯಕೈಗೊಂಡು ಕಾಮಗಾರಿಗೆ ಚಾಲನೆ ನೀಡಲಾಗುವುದು. ಈಗಾಗಲೇ 20ಕೋಟಿ ರೂ.ಅನುದಾನ ನೀಡಲಾಗಿದ್ದು, ಡಿಪಿಆರ್ ಸಿದ್ದಗೊಂಡಿದೆ ಎಂದರು.
ರಾಜ್ಯದ ಆಲಮಟ್ಟಿ, ತುಂಗಭದ್ರ, ನಾರಾಯಣಪುರ ಜಲಾಶಯ ಸೇರಿ ನಾನಾ ಜಲಾಶಯದಿಂದ ಕಾರ್ಖಾನೆಗಳಿಗೆ ಹಂಚಿಕೆಯಾದ ನೀರಿನ ಸದ್ಬಳಕೆ ಬಗ್ಗೆ ಆಡಿಟ್ ನಡೆದಿದೆ ಎಂದರು. ಜಿಲ್ಲೆಯಲ್ಲಿ ಲಕ್ಷ್ಮೀ ಮಿತ್ತಲ್ ಸೇರಿದಂತೆ ನಾನಾ ಕಂಪನಿಗಳು ಕೈಗಾರಿಕಾ ಘಟಕಗಳ ಸ್ಥಾಪನೆಗೆ 10ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿದ್ದು, ಇಲ್ಲಿವರೆಗೂ ಕಾರ್ಖಾನೆ ನಿರ್ಮಾಣ ಮಾಡಿಲ್ಲ, ಈ ಕುರಿತು ಅವರಿಗೆ ನೋಟೀಸ್ ಜಾರಿಮಾಡಲಾಗಿದೆ. ಪರ್ಯಾಯ ಬಳಕೆಬಗ್ಗೆ ಅವರಿಂದ ಉತ್ತರ ಬಂದಿದ್ದು, ಅದಕ್ಕೆ ಸರ್ಕಾರ ಒಪ್ಪಿಗೆ ನೀಡಿಲ್ಲ, ಅವರಿಂದ ಭೂಮಿಯನ್ನು ಹಿಂಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಾರಿಗೆ ಸಚಿವ ಬಿ.ಶ್ರಿರಾಮುಲು, ಶಾಸಕರಾದ ಗಾಲಿ ಸೋಮಶೇಖರ್ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ, ಸಂಸದ ವೈ.ದೇವೇಂದ್ರಪ್ಪ, ಮಾಜಿ ಸಂಸದ ಸಣ್ಣ ಫಕೀರಪ್ಪ, ಜೆ.ಶಾಂತಾ ಇತರರಿದ್ದರು.