ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ದಿ ಕೇರಳ ಫೈಲ್ಸ್’ ಸಿನಿಮಾ ಇದೇ ಶುಕ್ರವಾರ ತೆರೆಕಂಡಿದೆ. ಅದರಲ್ಲೂ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಈ ಸಿನಿಮಾಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ. ಮಧ್ಯಪ್ರದೇಶದಂತಹ ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿವೆ. ಏತನ್ಮಧ್ಯೆ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ತಮಿಳುನಾಡಿನ ಮಲ್ಟಿಪ್ಲೆಕ್ಸ್ ಥಿಯೇಟರ್ಗಳಲ್ಲಿ ಭಾನುವಾರದಿಂದ ಚಲನಚಿತ್ರವನ್ನು ನಿಲ್ಲಿಸುವುದಾಗಿ ಸರ್ಕಾರ ಘೋಷಿಸಿದೆ.
‘ದಿ ಕೇರಳ ಸ್ಟೋರಿ’ ಬಿಡುಗಡೆ ವಿರೋಧಿಸಿ ತಮಿಳುನಾಡಿನ ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಶನಿವಾರ ಚೆನ್ನೈನಲ್ಲಿ ಪ್ರತಿಭಟನೆ ನಡೆಸಿತು. ಚೆನ್ನೈನ ಸ್ಕೈವಾಕ್ ಮಾಲ್ ಬಳಿಯ ಅಣ್ಣಾನಗರ ಆರ್ಚ್ನಲ್ಲಿ ನಾಮ್ ತಮಿಳರ್ ಪಕ್ಷದ ಸಂಘಟಕ, ನಟ ಮತ್ತು ನಿರ್ದೇಶಕ ಸೀಮಾನ್ ನೇತೃತ್ವದಲ್ಲಿ ಕಾರ್ಯಕರ್ತರು ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಿನಿಮಾವನ್ನು ನಿಷೇಧಿಸುವಂತೆ ಘೋಷಣೆಗಳು ಕೇಳಿಬಂದಿದ್ದವು. ಇಲ್ಲಿನ ಜನರು ಸಿನಿಮಾ ನೋಡದಂತೆ ಸೂಚಿಸಿದ್ದಾರೆ. ಕೇರಳ ಸ್ಟೋರಿ ಸಿನಿಮಾ ಮುಸ್ಲಿಂ ಸಮುದಾಯಕ್ಕೆ ವಿರುದ್ಧವಾಗಿದ್ದು, ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳು ಸಿನಿಮಾವನ್ನು ನಿಷೇಧಿಸಬೇಕು ಎಂದು ಸೀಮಾನ್ ಈ ಹಿಂದೆ ಆಗ್ರಹಿಸಿದ್ದರು.
‘ದಿ ಕೇರಳ ಸ್ಟೋರಿ’ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದ ವಿವಾದಗಳು ಹುಟ್ಟಿಕೊಂಡಿವೆ. ಕೇರಳ ರಾಜ್ಯದಲ್ಲಿ ಕಣ್ಮರೆಯಾದ 32,000 ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರು ನಂತರ ಭಯೋತ್ಪಾದಕ ಸಂಘಟನೆ ಐಎಸ್ಐಗೆ ಸೇರಿದ ಕಥೆಯನ್ನು ಆಧರಿಸಿ ನಿರ್ದೇಶಕ ಸುದೀಪ್ತೋ ಸೇನ್ ಈ ಸಿನಿಮಾ ಮಾಡಿದ್ದಾರೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಕೇರಳ ಸಿಎಂ ಪಿಣರಾಯಿ ವಿಜಯನ್ ಈಗಾಗಲೇ ಈ ಸಿನಿಮಾವನ್ನು ಟೀಕಿಸಿದ್ದಾರೆ.