ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಗವಾನ್ ಶ್ರೀಕೃಷ್ಣನ ಜನ್ಮಭೂಮಿಯಲ್ಲಿರುವ, ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ, ಹಿಂದು ಸಂಘಟನೆಗಳಿಂದ, ಶ್ರೀಕೃಷ್ಣ ಭಕ್ತರಿಂದ ಬಂದಿರುವ ಹಲವು ಅರ್ಜಿಗಳ ಪೈಕಿ ಒಂದನ್ನು ಮಥುರಾ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ.
1669-70ರಲ್ಲಿ ವಿದೇಶಿ ಮೊಗಲ್ ಆಕ್ರಮಣಕಾರ ಔರಂಗಜೇಬನ ಆಜ್ಞೆಯಂತೆ ಮಸೀದಿಯನ್ನು ಕತ್ರ ಕೇಶವ ದೇವ ದೇವಸ್ಥಾನದ ಬಳಿ, ದೇವಾಲಯದ ಜಾಗದಲ್ಲೇ ನಿರ್ಮಿಸಲಾಗಿತ್ತು. ಶ್ರೀಕೃಷ್ಣ ಜನ್ಮಭೂಮಿ ಸಂಕೀರ್ಣದ ವಿಸ್ತೀರ್ಣ 13.37ಎಕರೆಗಳಷ್ಟು. ಇದನ್ನು ತೆರವುಗೊಳಿಸಬೇಕೆಂಬುದು ಅರ್ಜಿದಾರರ ಆಗ್ರಹವೆಂದು ವಕೀಲ ಹರಿಶಂಕರ ಜೈನ್ ತಿಳಿಸಿದ್ದಾರೆ. ಕತ್ರ ಕೇಶವ ದೇವ ದೇವಾಲಯದ ಬಾಲಕೃಷ್ಣನ ಸ್ನೇಹಿತನೆಂಬ ನೆಲೆಯಲ್ಲಿ ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಅರ್ಜಿ ಸಲ್ಲಿಸಿದವರು.
ಶ್ರೀಕೃಷ್ಣನ ಆರಾಧಕನಾದ ನಮಗೆ ಭಗವಂತನ ಆಸ್ತಿಯನ್ನು ಸಂರಕ್ಷಿಸಿಕೊಳ್ಳೋ ಬಾಧ್ಯತೆ ಇದೆ. ಶ್ರೀಕೃಷ್ಣನ ಜನುಮ ಭೂಮಿಯಲ್ಲಿ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಆಸ್ತಿ ಹಂಚಿಕೆ ಬಗ್ಗೆ ಕೆಲವು ವರ್ಷಗಳ ಹಿಂದೆ ಅಕ್ರಮ ಸಂಧಾನ ನಡೆದಿತ್ತು ಎಂದು ಅರ್ಜಿದಾರರ ಪರ ವಕೀಲ ಗೋಪಾಲ ಖಂಡೇಲ್ವಾಲ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ.
ಏನಿದು ವಿವಾದ?
ಕತ್ರ ಕೇಶವ ದೇವಾಲಯ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ವಿದೇಶಿ ಮೊಗಲ್ ಆಕ್ರಮಣಕಾರ ಔರಂಗಜೇಬ್ ಆದೇಶದಂತೆ ನಿರ್ಮಿಸಲಾದ ಮಸೀದಿಯಿಂದಾಗಿ ಹಿಂದುಗಳಿಗೆ ತಮ್ಮ ಅತ್ಯಂತ ಶ್ರದ್ಧೆಯ ಭಗವಾನ್ ಶ್ರೀಕೃಷ್ಣನ ಜನ್ಮಭೂಮಿ ಮಂದಿರದ ಹಕ್ಕು ನಿರಾಕರಿಸಲ್ಪಟ್ಟಂತಾಗಿದೆ ಎಂಬುದು ಅಳಲಾಗಿದೆ.ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಒಂದಾಗಿ ದ್ವಾಪರ ಯುಗದಲ್ಲಿ ಶ್ರೀಕೃಷ್ಣನ ಅವತಾರವಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ