ಹೊಸದಿಗಂತ ವರದಿ,ಸೋಮವಾರಪೇಟೆ:
ಖದೀಮನೊಬ್ಬ ಪಟ್ಟಣದ ಎರಡು ದೇವಾಲಯಗಳ ಹುಂಡಿಗೆ ಕನ್ನ ಹಾಕುವ ಮೂಲಕ ಕಳೆದ ಎರಡು ಮೂರು ವರ್ಷಗಳಿಂದ ಪಟ್ಟಣದಲ್ಲಿ ಕಳ್ಳತನವಿಲ್ಲದೆ ನೆಮ್ಮದಿಯಿಂದಿದ್ದ ಪೊಲೀಸ್ ಇಲಾಖೆಗೆ ನಿದ್ದೆಗೆಡುವಂತೆ ಮಾಡಿದ್ದಾನೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸೋಮೇಶ್ವರ ದೇವಾಲಯಕ್ಕೆ ಶನಿವಾರ ನಡುರಾತ್ರಿ ಹಂಚು ತೆಗೆದು ಒಳಪ್ರವೇಶಿಸಿರುವ ಕಳ್ಳ, ಅಲ್ಲಿನ ಎರಡು ಹುಂಡಿಗಳನ್ನು ತೆರೆದು ಹಣ ದೋಚಿದ್ದಾನೆ. ಸಾಕಷ್ಟು ನೋಟುಗಳನ್ನು ಜೇಬಿಗಿಳಿಸಿ ಚಿಲ್ಲರೆ ಭಾರವಾಗಬಹುದೆಂದು ಒಂದಷ್ಟು ಅಲ್ಲಿಯೇ ಬಿಟ್ಟುಹೋಗಿದ್ದಾನೆ. ಇಷ್ಟೆಲ್ಲಾ ಚಿತ್ರಗಳು ಸಿ.ಸಿ.ಟಿವಿಯಲ್ಲಿ ಸೆರೆಯಾಗುತ್ತಿರುವುದನ್ನು ಗಮನಿಸಿದ ಕಳ್ಳ ತನ್ನೆಲ್ಲಾ ಕೆಲಸ ಮುಗಿಸಿ ಹೊರಡುವಾಗ ಸಿ.ಸಿ.ಟಿ.ವಿ ಕ್ಯಾಮರಾವನ್ನು ಕಡಿತಗೊಳಿಸಿ ಹೊರ ನಡೆದಿದ್ದಾನೆ.
ಬೆಳಗ್ಗೆ ಎಂದಿನಂತೆ ಅರ್ಚಕರು ಬೆಳಗ್ಗೆ ಪೂಜೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮತ್ತೊಂದೆಡೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಆಂಜನೇಯ ದೇವಾಲಯಕ್ಕೂ ಕಣ್ಣು ಹಾಕಿರುವ ಕಳ್ಳ ಅಲ್ಲಿಯ ಹುಂಡಿಯಲ್ಲೂ ತನ್ನ ಕೈ ಚಳಕ ತೋರಿಸಿದ್ದಾನೆ.
ಸೋಮೇಶ್ವರ ದೇವಾಲಯ ಹಾಗೂ ಆಂಜನೇಯ ದೇವಾಲಯದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಅಂದಾಜು 6 ಸಾವಿರ ಹಾಗೂ 8 ಸಾವಿರ ಕಳುವಾಗಿರಬಹುದೆಂದು ತಿಳಿಸಿದ್ದಾರೆ.
ಸೋಮವಾರಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.