ಹೊಸದಿಗಂತ ಡಿಜಿಟಲ್ ಡೆಸ್ಕ್:
“ಅಜ್ಜಿ ಅಂದ್ರೆ ನಂಗೆ ಎಲ್ಲಿಲ್ಲದ ಪ್ರೀತಿ, ನನ್ನ ಬಾಲ್ಯದಿಂದಲೂ ಅಜ್ಜಿ ನನಗೆ ಬೆಂಬಲವಾಗಿದ್ದರು. ನಾನು ಎಲ್ಲೇ ಹೋದರು ಅವರು ನನ್ನ ಜೊತೆ ಯಾವಾಗಲೂ ಇರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ….”
ಫೆಮಿನಾ ಮಿಸ್ ಇಂಡಿಯಾ ಸಿನಿ ಶೆಟ್ಟಿ ಮುದ್ದು ಮುದ್ದಾಗಿ ಹೀಗೆನ್ನುತ್ತಿದ್ದರೆ ಹತ್ತಿರ ನಿಂತಿದ್ದ ಅಜ್ಜಿ ಕಣ್ಣಲ್ಲಿ ಹನಿ ನೀರು ಜಿನುಗುತ್ತಿತ್ತು.
ಹುಟ್ಟೂರು ಉಡುಪಿಗೆ ಆಗಮಿಸಿದ ಅವರನ್ನು ಉಡುಪಿಯ ಜೋಡುಕಟ್ಟೆಯಲ್ಲಿ ಜಿಲ್ಲಾ ಬಂಟರ ಸಂಘದ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು. ಚೆಂಡೆ, ಕೊಂಬುಗಳ ಘೋಷದೊಂದಿಗೆ ಅಲಂಕೃತಗೊಂಡ ವಾಹನದಲ್ಲಿ ನಗರದ ನೈವೇದ್ಯ ಸರ್ಕಲ್ನಿಂದ ಅವರು ಅಮ್ಮಣ್ಣಿ ರಾಮಣ್ಣ ಶೆಟ್ಟಿ ತಂದೆ ಸದಾನಂದ ಶೆಟ್ಟಿ ತಾಯಿ ಹೇಮ ಶೆಟ್ಟಿ ಜೊತೆಗೆ ಮೆರವಣಿಗೆಯಲ್ಲಿ ಸಭಾಂಗಣದವರೆಗೆ ಆಗಮಿಸಿದರು. ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಹೊರಭಾಗದಲ್ಲಿರುವ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಕುಟುಂಬಸ್ಥರೊಂದಿಗೆ ಸಿನಿ ಶೆಟ್ಟಿ ವಿಶೇಷ ಪೂಜೆ ನೆರವೇರಿಸಿದರು.
ಕಟೀಲು ದೇವಿಯ ದರ್ಶನ ಮಾಡಿ ಬಂದಿದ್ದೇನೆ. ಮನೆಗೆ ಹೋಗಿ ಅಜ್ಜಿಯ ಜೊತೆ ಕುಳಿತು ಮಾತನಾಡಬೇಕು. ಈಗಾಗಲೇ ನಾನು ಎರಡು ಮೂರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅನೇಕ ಸಾಮಾಜಿಕ ಕಾರ್ಯ ಮಾಡುವ ಉತ್ಸಾಹವಿದೆ, ಮಿಸ್ ಇಂಡಿಯಾ ಪುಟದಲ್ಲಿ ಈ ಬಗ್ಗೆ ಅಧಿಕೃತವಾಗಿ ಹೇಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಚಿತ್ರನಟ ಗುರುಕಿರಣ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ಮಹಿಳಾಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ರಾಷ್ಟ್ರೀಯ ಬಂಟರ ಒಕ್ಕೂಟದ ಉಪಾಧ್ಯಕ್ಷ ಜಯಕರ್ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ