ದಿಗಂತ ವರದಿ ವಿಜಯಪುರ:
ಪಂಚಮಸಾಲಿ ಮೂರು ಪೀಠವಾದರೂ ಹರಿಹರ ಪೀಠ ಮೂಲವಾದದ್ದು, ಎಲ್ಲ ಮಠಾಧೀಶರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಧಾರ್ಮಿಕ ಹಾಗೂ ಸಮಾಜುದ್ಧಾರ ಕಾರ್ಯಕ್ಕೆ ಮುಂದಾಗಲಾಗುವುದು ಎಂದು ಮನಗೂಳಿಯ ಸಂಗನಬಸವ ಶ್ರೀಗಳು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನೆ ಎಂದ ಕೂಡಲೆ ಕೆಲ ಸಣ್ಣ, ಪುಟ್ಟ ಸಮಸ್ಯೆಗಳು ಇರುವುದು ಸಹಜ. ಮತ್ತೆ ಎಲ್ಲರೂ ಒಂದಾಗುವಂತೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ಸೇರಿ ಎಲ್ಲರಿಗೂ 3 ನೇ ಪೀಠಾರೋಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು ಎಂದರು.
ಫೆ.13 ರಂದು ಜಮಖಂಡಿಯ ಆಲಗೂರಿನಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು 3 ನೇ ಪೀಠದ ಪೀಠಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪೀಠಕ್ಕೆ ಬಬಲೇಶ್ವರದ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮೀಜಿ ನೂತನ ಜಗದ್ಗುರುಗಳಾಗಲಿದ್ದಾರೆ ಎಂದರು.
ಈ ಪೀಠಾರೋಹಣ, ಧರ್ಮ ಸಮ್ಮೇಳನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿದಂತೆ ಉತ್ತರ ಕರ್ನಾಟಕದ ಸಚಿವರು, ಮಾಜಿ ಸಚಿವರು, ಗಣ್ಯರು ಹಾಗೂ ರವಿಶಂಕರ ಗುರೂಜಿ, ಕನ್ನೆರಿಯ ಅದೃಶ್ಯಕಾಡ ಸಿದ್ದೇಶ್ವರ ಸ್ವಾಮಿಜಿ ಸೇರಿದಂತೆ ರಾಜ್ಯದ ವಿವಿಧೆಡೆಯ ಮಠಾಧೀಶರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಜಿ, ಬುರಣಾಪುರದ ಯೋಗೇಶ್ವರಿ ಮಾತಾ, ಮುಖಂಡ ಸುರೇಶ ಬಿರಾದಾರ ಮಾತನಾಡಿದರು.
ಮುಖಂಡರಾದ ಶಂಕರಗೌಡ ಮನಗೂಳಿ, ಅಶೋಕ ಪಾಟೀಲ, ರವಿ ಮುಕರ್ತಿಹಾಳ, ಶಂಕರಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.