ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದ 250 ಭಾರತೀಯರನ್ನು ಹೊತ್ತ ಏರ್ ಇಂಡಿಯಾದ ಎರಡನೇ ವಿಮಾನ ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ ನಿಂದ ಹೊರಟಿದ್ದ ವಿಮಾನ ಸುರಕ್ಷಿತವಾಗಿ ಭಾರತವನ್ನು ತಲುಪಿದೆ. ಈ ವೇಳೆ ದೆಹಲಿಯ ವಿಮಾನ ನಿಲ್ದಾಣಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸ್ವಾಗತಿಸಿದರು.
ಉಕ್ರೇನ್ ಹಾಗೂ ರಷ್ಯಾದೊಂದಿಗೆ ನಿರಂತರ ಸಂಪರ್ಕರದಲ್ಲಿರುವ ಪ್ರಧಾನಿ ಮೋದಿ, ಎಲ್ಲಾ ಭಾರತೀಯ ಪ್ರಜೆಗಳ ರಕ್ಷಣೆ ಕುರಿತು ಮಾತುಕತೆ ನಡೆಸುತ್ತಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ನಿನ್ನೆ ರಾತ್ರಿ 219 ಜನರು ಮುಂಬೈ ಗೆ ಬಂದಿಳಿದಿದ್ದಾರೆ. ಇಂದು ಬೆಳಗ್ಗೆ ಮತ್ತೊಂದು ವಿಮಾನ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಿದೆ.
ಯುದ್ಧ ಪೀಡಿತ ಪ್ರದೇಶದಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಯೋಜನೆಗೆ ಆಪರೇಷನ್ ಗಂಗಾ ಎಂದು ಹೆಸರಿಡಲಾಗಿದೆ. ಪ್ರಸ್ತುತ ಹಂಗೇರಿಯ ಬುಡಾಪೆಸ್ಟ್ ನಿಂದ 240 ಜನರನ್ನು ಹೊತ್ತಿರುವ ಮೂರನೇ ವಿಮಾನ ಭಾರತಕ್ಕೆ ಹೊರಟಿದೆ.
ಉಕ್ರೇನ್ ನಲ್ಲಿ ಯುದ್ಧ ಪರಿಸ್ಥಿತಿಯಿಂದ ವಿಮಾನ ಸಂಚಾರ ರದ್ದುಗೊಳಿಸಲಾಗಿದ್ದು, ರೊಮೇನಿಯಾಗೆ ಭಾರತೀಯರನ್ನು ರಸ್ತೆ ಮೂಲಕ ಕರೆಸಿಕೊಳ್ಳಲಾಗುತ್ತಿದೆ. ಈಗಾಗಲೇ 450ಕ್ಕೂ ಹೆಚ್ಚು ಜನರನ್ನು ಭಾರತಕ್ಕೆ ಕರೆತರಲಾಗಿದ್ದು, ಒಟ್ಟು 15-20 ಸಾವಿರ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿದ್ದಾರೆ.