ಹೊಸದಿಗಂತ ವರದಿ, ದಾವಣಗೆರೆ:
ಬಜೆಟ್ ಮಂಡಿಸಿದಾಗ ಬಜೆಟ್ ಗಾತ್ರ ಗೊತ್ತಾಗಲಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಆರ್ಥಿಕ ಇತಿಮಿತಿಯೊಳಗೆ ಒಳ್ಳೆಯ ಬಜೆಟ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಹರಿಹರ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಬಜೆಟ್ ಗಾತ್ರ ಗೊತ್ತಾಗಲಿದೆ. ಹರಿಹರ ಕ್ಷೇತ್ರದ ಅಭಿವೃದ್ಧಿಗೂ ಹಣ
ಬಿಡುಗಡೆ ಮಾಡುತ್ತೇವೆ ಎಂದರು.
ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳ ಪ್ರಸ್ತಾವನೆಯಂತೆ ಹರಿಹರ ನದಿ ತೀರದಲ್ಲಿ ತುಂಗಭದ್ರಾ ಆರತಿಗೆ ಸರ್ಕಾರ ಸಂಕಲ್ಪಿಸಿದೆ. ಉತ್ತರ ಭಾರತದ ಗಂಗಾ ಆರತಿ ಮಾದರಿಯಲ್ಲಿ ತುಂಗಾಭದ್ರಾ ಆರತಿ ನಡೆಯಲಿದೆ. ಇದಕ್ಕಾಗಿ 30 ಕೋಟಿ ರೂ. ವೆಚ್ಚದಲ್ಲಿ 108 ಯೋಗ ಮಂಟಪಗಳ ನಿರ್ಮಾಣ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಈ ಮೂಲಕ ಹರಿಹರ ಕ್ಷೇತ್ರವು ಪ್ರವಾಸಿ ತಾಣವಾಗಿ, ಅಧ್ಯಾತ್ಮಿಕ ಕ್ಷೇತ್ರವಾಗಿ ಅಭಿವೃದ್ಧಿಯಾಗಲಿದೆ ಎಂದು ಅವರು ತಿಳಿಸಿದರು.