ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಕಟ್ಟಿದ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಇಂದು ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ. ಅನಾವರಣಕ್ಕೂ ಮುನ್ನವೇ ‘ವಿಶ್ವ ಬುಕ್ ಆಫ್ ರೆಕಾರ್ಡ್ಸ್’ ಸೇರಿದ ಈ ಕಂಚಿನ ಪ್ರತಿಮೆಯನ್ನು “ಅಭಿವೃದ್ಧಿಯ ಪ್ರತಿಮೆ” ಎಂದು ಕರೆಯಲ್ಪಟ್ಟಿದ್ದು, ಇದನ್ನು ಬೆಂಗಳೂರಿನ ಬೆಳವಣಿಗೆಗೆ ನಗರದ ಸಂಸ್ಥಾಪಕ ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ನಿರ್ಮಿಸಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ಪ್ರತಿಮೆಯನ್ನು ಖ್ಯಾತ ಶಿಲ್ಪಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಮ್ ವಾಂಜಿ ಸುತಾರ್ ವಿನ್ಯಾಸಗೊಳಿಸಿದ್ದಾರೆ. ಸುತಾರ್ ಅವರು ಗುಜರಾತ್ನಲ್ಲಿ ‘ಏಕತೆಯ ಪ್ರತಿಮೆ’ ಮತ್ತು ಬೆಂಗಳೂರಿನ ವಿಧಾನಸೌಧದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ನಿರ್ಮಿಸಿದ ಹೆಗ್ಗಳಿಕೆ ಅವರದ್ದು.
ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು 1537ರಲ್ಲೇ ಬೆಂಗಳೂರು ನಗರವನ್ನು ಕಟ್ಟಿದರು. ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮಾಡುವುದು ಕೆಂಪೇಗೌಡರ ಮಹದಾಸೆ. ಹಾಗಾಗಿಯೇ ತಾವು ಕಟ್ಟಿದ ಈ ಕೋಟೆಯಲ್ಲಿ ಆಯಾ ಕುಲ ಕುಸಬುದಾರರಿಗೆ ಅನುಗುಣವಾಗಿ ಪೇಟೆಗಳನ್ನು ಕಟ್ಟಿಕೊಂಡು, ವ್ಯಾಪಾರ-ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರು. ಅಂದಿನಿಂದ ಇಂದಿನವರೆಗೆ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ವಿಶ್ವದಾದ್ಯಂತ ಇರುವ ಪ್ರಮುಖ ಐಟಿ-ಬಿಟಿ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯೂರಿವೆ. ಕೋಟ್ಯಾಂತರ ಮಂದಿ ತಮ್ಮ ಬದುಕನ್ನು ಈ ನಗರದಲ್ಲಿ ಕಟ್ಟುಕೊಂಡಿದ್ದಾರೆ. ಇವೆರಲ್ಲರ ಬದುಕು ಹಸನಾಗಲು ಅಡಿಪಾಯ ಹಾಕಿದ ನಾಡಪ್ರಭು ಕೆಂಪೇಗೌಡರ ಸ್ಮರಣೆಗಾಗಿ ಪ್ರತಿಮೆ ತಲೆಯೆತ್ತಲಿದೆ.
ಕಂಚಿನ ಪ್ರತಿಮೆಯ ವಿಶೇಷತೆ
- ಕಂಚಿನ ಪ್ರತಿಮೆಯ ತೂಕ ಬರೋಬ್ಬರಿ 220ಟನ್. ಅದರಲ್ಲಿ ಕಂಚು 98 ಕೆಜಿ, ಅಡಿಪಾಯಕ್ಕಾಗಿ ಬಳಸಲಾದ ಕಬ್ಬಿಣ 120 ಟನ್.
- 18 ಅಡಿ ವಿಸ್ತಾರವಾದ ಕಟ್ಟೆಯನ್ನು ಪ್ರತಿಮೆಯ ಅಡಿಯಲ್ಲಿ ನಿರ್ಮಾಣ
- ಕೆಂಪೇಗೌಡರ ಜೀವನ ಪ್ರಮುಖ ಘಟನೆಗಳನ್ನು ಬಣ್ಣಿಸುವ ನಾಲ್ಕು ಉಬ್ಬು ಶಿಲ್ಪಗಳ ರಚನೆ, ಕಂಚಿನಲ್ಲಿಯೇ ತಯಾರಾದ ಉಬ್ಬು ಶಿಲ್ಪಗಳನ್ನು ನಾಲ್ಕು ಕಡೆ ಅಂಟಿಸಲಾಗಿದೆ
- ಕೆಂಪೇಗೌಡರ ಕೈಯಲ್ಲಿರುವ ಖಡ್ಗದ ತೂಕ 4ಟನ್
- ಕಂಚಿನ ಪ್ರತಿಮೆ ನಿರ್ಮಾಣಕ್ಕ ತೆಗೆದುಕೊಂಡ ಸಮಯ 18ತಿಂಗಳು
- ಅನಾವರಣಕ್ಕೆ ಪೂರ್ವಭಾವಿಯಾಗಿ ರಾಜ್ಯದಾದ್ಯಂತ 22,000 ಕ್ಕೂ ಹೆಚ್ಚು ಸ್ಥಳಗಳಿಂದ ‘ಮೃತ್ತಿಕೆ’ (ಪವಿತ್ರ ಮಣ್ಣು) ಸಂಗ್ರಹಣೆ
- ಪ್ರತಿಮೆ ಬಳಿ 23 ಎಕರೆ ಪ್ರದೇಶದಲ್ಲಿ ಹೆರಿಟೇಜ್ ಥೀಮ್ ಪಾರ್ಕ್ ನಿರ್ಮಾಣ
- ಥೀಮ್ ಪಾರ್ಕ್, ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಭರಿಸಿದ ವೆಚ್ಚ ಸುಮಾರು ₹ 84 ಕೋಟಿ