– ಬಂದಾತರ ಪ್ರಕಾಶ್
ಶಾಲೆ ಎಂದರೆ ಬುಕ್, ಪೆನ್, ಬ್ಯಾಗ್, ಡೆಸ್ಕ್, ಬಿಲ್ಡಿಂಗ್ ಎಂಬ ಕಲ್ಪನೆಗೆ ಇಲ್ಲಿನ ಯುವಕರ ತಂಡವೊಂದು ಹೊಸ ಸ್ಪರ್ಶ ನೀಡಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಶೈಕ್ಷಣಿಕ ನಿರ್ವಹಣೆಗೆ ಮುಖ್ಯಮಂತ್ರಿಗಳಿಂದ ಪ್ರಸಕ್ತ ಸಾಲಿನ ಸ್ವಾಭಿಮಾನಿ ಸಾರ್ವಜನಿಕ ಪ್ರಶಸ್ತಿಗೆ ತಾಲೂಕಿನ ನಿಂಬಳಗೆರೆ ಬಿ.ಕೆ.ವಿ. ಸರ್ಕಾರಿ ಪ್ರೌಢಶಾಲೆ ಆಯ್ಕೆಯಾಗುವ ಮೂಲಕ ಇದೀಗ ಶಾಲೆಯ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ.
ಕೊಟ್ಟೂರಿನ ಹಸಿರು ಹೊನಲು ತಂಡ ಔಷಧಿ ವನ ನಿರ್ಮಾಣ ಮಾಡಿದ್ದು ಇಲ್ಲಿನ ಶಾಲಾ ಮಕ್ಕಳಿಗೆ ಆಯುರ್ವೇದದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯ ಹೆಚ್ಚುವರಿ ಜಾಗೆಯನ್ನೇ ಇದಕ್ಕೆ ಬಳಕೆ ಮಾಡಿಕೊಂಡಿದೆ. ಇದಕ್ಕೆ “ಚರಕ ವನ’ ಎಂದು ಹೆಸರಿಸಿದೆ. ಹಾಗೆ ಇಲ್ಲಿನ 30 ವಿದ್ಯಾರ್ಥಿಗಳಿಗೆ ವರ್ಲಿ ಚಿತ್ರಕಲೆ ಕಲಿಸಲು ಮುಂದಾಗಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದೆ.
ಈ ಹೊಸತನಕ್ಕೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಶಿಕ್ಷಣಾಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನ, ಎಸ್ಡಿಎಂಸಿ ಮತ್ತು ಗ್ರಾಪಂ ಆಡಳಿತ ವರ್ಗ ಹಾಗೂ ಗ್ರಾಮಸ್ಥರ ಸಹಕಾರ ಕಾರಣವಾಗಿದೆ ಎನ್ನುತ್ತಾರೆ ಶಾಲೆಯ ಮುಖೋಪಾದ್ಯಾಯ ಜಿ.ಫಕ್ಕೀರಪ್ಪ. ಔಷಧಿ ವನ ನಿರ್ಮಾಣದಲ್ಲಿ ಹಸಿರು ಹೊನಲು ತಂಡದ ಗುರುರಾಜ್, ನಟರಾಜ್, ರವಿಕುಮಾರ್, ವಿಜಯ ಕುಮಾರ್, ಅಜಯ ಕುಮಾರ್, ಗಿರೀಶ್ ಸ್ವಾಮಿ ಸೇರಿ ಹಲವರು ಪಾಲ್ಗೊಂಡಿದ್ದನ್ನು ಸ್ಮರಿಸುತ್ತಾರೆ.