ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲ್ದಾರೆಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು, ಆರು ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಳೆದ ಹತ್ತು ದಿನಗಳಿಂದ ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ನಡೆಸಿತ್ತು.ಆದರೆ ಒಂದು ಬಾರಿ ಅರಿವಳಿಕೆ ಚುಚ್ಚುಮದ್ದು ತಗುಲಿಯೂ ತಪ್ಪಿಸಿಕೊಂಡು ಕಾಡಿಗೆ ನುಸುಳಿದ್ದರೆ, ಮತ್ತೊಂದು ಬಾರಿ ಕಣ್ಣಿಗೆ ಕಾಣಿಸಿಯೂ ಮರೆಯಾಗಿತ್ತು.ಇದರೊಂದಿಗೆ ಅರಣ್ಯ ಇಲಾಖೆಗೆ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿತ್ತು.
ದುಬಾರೆಯ ನಾಲ್ಕು ಸಾಕಾನೆಗಳ ನೆರವಿನೊಂದಿಗೆ ಹುಲಿ ಸೆರೆ ಕಾರ್ಯಾಚರಣೆ ನಡೆದಿತ್ತು.ಮಂಗಳವಾರ ಸಂಜೆ ವೇಳೆಗೆ ಮತ್ತೆ ಪತ್ತೆಯಾದ ಹುಲಿಗೆ ಎರಡು ಬಾರಿ ಅರಿವಳಿಕೆ ನೀಡಿ ಸೆರೆ ಹಿಡಿಯಲಾಯಿತು. ಇದರೊಂದಿಗೆ ಗ್ರಾಮಸ್ಥರ ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳೂ ನಿಟ್ಟುಸಿರು ಬಿಡುವಂತಾಯಿತು.