ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಳಿವಿನಂಚಿಗೆ ಬಂದು ತಲುಪಿರುವ ರಣಹದ್ದುಗಳ ಸಂರಕ್ಷಣೆಗೆ ಉತ್ತರ ಪ್ರದೇಶ ಸರ್ಕಾರ ಮುಂದಾಗಿದ್ದು ಈ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ಹಾಕಿಕೊಂಡಿದೆ. ರಣಹದ್ದುಗಳ ಸಂರಕ್ಷಣೆಗೆಂದೇ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ವಿಶ್ವದ ಮೊದಲ ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಇದನ್ನು ಸೆಪ್ಟೆಂಬರ್ 3 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದಾರೆ.
ಉತ್ತರ ಪ್ರದೇಶದ ಗೋರಖ್ಪುರ ಅರಣ್ಯ ವಿಭಾಗದಲ್ಲಿರುವ ಮಹಾರಾಜ್ಗಂಜ್ನ ಫರೆಂಡಾದಲ್ಲಿ ನಿರ್ಮಿಸಲಾಗುತ್ತಿರುವ ಕೇಂದ್ರದ ನಿರ್ಮಾಣಕ್ಕೆ 1.06 ಕೋಟಿ ರೂಪಾಯಿ ಹೆಚ್ಚುವರಿ ಬಜೆಟ್ ಬಿಡುಗಡೆಯಾಗಿದೆ. ಈ ಸಂರಕ್ಷಣಾ ಕೇಂದ್ರವು ಗೋರಖ್ಪುರ ನಗರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿಂದೆ 2021ರಲ್ಲಿ ಕೆಂಪುತಲೆಯ ರಣಹದ್ದು ಸಂರಕ್ಷಣಾ ಕೇಂದ್ರ ಯೋಜನೆಗೆ 80 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು.
ಉದ್ಘಾಟನೆಯು ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನದಂದು ಅಂದರೆ ಸೆಪ್ಟೆಂಬರ್ 3 ರಂದು ನಡೆಯಲಿದೆ . ಈ ರಣಹದ್ದು ಸಂರಕ್ಷಣಾ ಕೇಂದ್ರದ ನಿರ್ಮಾಣಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಭೂಮಿ ಮಂಜೂರು ಮಾಡಿದ್ದರು. ಯೋಗಿ ಸರ್ಕಾರವು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯೊಂದಿಗೆ 15 ವರ್ಷಗಳ ಒಪ್ಪಂದ ಮಾಡಿಕೊಂಡು ಅದರಡಿಯಲ್ಲಿ ನಿರ್ಮಾಣ ಮಾಡಲಾಗಿದೆ.