ಹೊಸದಿಗಂತ ವರದಿ,ಅಂಕೋಲಾ:
ಮಹಿಳೆಯೋರ್ವರ ಕುತ್ತಿಗೆಯಿಂದ ಬಂಗಾರದ ಹವಳದ ಸರವನ್ನು ಹರಿದು ಓಡಿ ಹೋಗಿ ಬಂಧಿತನಾಗಿದ್ದ ಆರೋಪಿಗೆ ಅಂಕೋಲಾ ಜೆ.ಎಂ.ಎಫ್. ಸಿ ನ್ಯಾಯಾಲಯ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಕನಸೆಗದ್ದೆ ನಿವಾಸಿ ನಾಗರಾಜ ವಿಜಯ ಭೋವಿ ಎಂಬಾತ
2015 ರ ಅಕ್ಟೋಬರ್ 14 ರಂದು ಪಟ್ಟಣದ ಶಾಲಿನಿ ನಾಗೇಶ ಕಾಳೆ ಎನ್ನುವವರ ಮನೆಗೆ ನುಗ್ಗಿ ತಾನು ಪ್ರಿಡ್ಜ್ ರಿಪೇರಿ ಮಾಡಲು ಬಂದಿರುವುದಾಗಿ ಹೇಳಿ ತಮ್ಮ ಮನೆಯಲ್ಲಿ ಯಾವುದೇ ಪ್ರಿಡ್ಜ್ ರಿಪೇರಿ ಇಲ್ಲ ಎಂದು ಶಾಲಿನಿ ಕಾಳೆ ತಿಳಿಸುತ್ತಿದ್ದಾಗ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಹರಿದು ಸರದ ತುಂಡಿನೊಂದಿಗೆ ಪರಾರಿಯಾಗಿದ್ದ ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಯನ್ನು ಬಂಧಿಸಿದ ಅಂದಿನ ಅಂಕೋಲಾ ಪೊಲೀಸ್ ನಿರೀಕ್ಷಕ ಅರುಣಕುಮಾರ ಕೋಳುರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಂಕೋಲಾ ಸಿವಿಲ್ ಮತ್ತು ಜೆ.ಎಂ.ಎಫ್. ಸಿ ನ್ಯಾಯಾಧೀಶ ಪ್ರಶಾಂತ ಬಾದವಡಗಿ ಅವರು ಆರೋಪಿತನಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಗಿರೀಶ್ ಪಟಗಾರ ವಾದಿಸಿದ್ದರು.