ಹೊಸದಿಗಂತ ವರದಿ ಶಿರಸಿ:
ಉತ್ತರ ಕನ್ನಡ ಜಿಲ್ಲೆ ವಿಸ್ತಾರವಾಗಿದ್ದು ಎರಡು ಜಿಲ್ಲೆಯನ್ನಾಗಿ ಮಾಡಬೇಕಾದ ಅನಿವಾರ್ಯತೆ ಇದೆ. ಶಿರಸಿ ಜಿಲ್ಲೆ ಮಾಡುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಲ್ಲಿನ ಮಾರ್ಕೆಟ್ ಯಾರ್ಡನ ಟಿಎಸ್ಎಸ್ ನಲ್ಲಿ ಕಾರ್ಮಿಕರ ರಾಜ್ಯ ವಿಮಾ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಜಿಲ್ಲೆ ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಕಾರ್ಯ ಚಟುವಟಿಕೆಗೆ ತೊಂದರೆ ಆಗುತ್ತಿದೆ. ಶಿರಸಿ ಜಿಲ್ಲೆಯಾಗಬೇಕು ಎನ್ನುವುದು ಅನೇಕ ದಶಕಗಳ ಕೂಗು ಕೇಳಿ ಬರುತ್ತಿದೆ. ಇದು ಜನರ ಅಪೇಕ್ಷೆಯೂ ಆಗಿದೆ ಎಂದರು.
ಈಗಾಗಲೇ ವಿಸ್ತಾರವಾಗಿದ್ದ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ, ಉಡುಪಿ, ಗದಗ ಸೇರಿ ಅನೇಕ ಜಿಲ್ಲೆಗಳು ಬೇರೆಯಾಗಿವೆ. ಹೀಗಾಗಿ ಶಿರಸಿ ಜಿಲ್ಲಯನ್ನು ಮಾಡುವ ಕುರಿತು ಮುಖ್ಯ ಮಂತ್ರಿಗಳಿಗೆ ತಿಳಿಸಲಾಗಿದೆ. ಸರಕಾರ ಜನರ ಅಭಿವೃದ್ಧಿ ದೃಷ್ಟಿಯಿಂದ ನಿಶ್ಚಿತವಾಗಿ ಉತ್ತಮ ನಿರ್ಣಯ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದರು.