ಹೊಸದಿಗಂತ ವರದಿ ಮಡಿಕೇರಿ:
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತ ಕುಂಠಿತವಾಗಿದೆ. ಬಜರಂಗದಳ, ಶ್ರೀರಾಮಸೇನೆಯಂಹ ‘ಎಕ್ಸ್ಟ್ರಾ ಫೋರ್ಸ್ ರೂಲಿಂಗ್’ ರಾಜ್ಯದಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದಲ್ಲಿ ದೇಶದಲ್ಲಿಯೇ ಕರ್ನಾಟಕ ಮಾದರಿ ರಾಜ್ಯವಾಗಿದೆ. ಆದರೆ ಇತ್ತೀಚೆಗೆ ಮೀಸಲಾತಿ ಹಂಚಿಕೆಯ ವಿಚಾರದಲ್ಲಿ ಸರ್ಕಾರ ಸಂವಿಧಾನ ವಿರೋಧಿ ನಡೆಗಳನ್ನು ಅನುಸರಿಸುತ್ತಿದೆ. ಪಂಚಮಸಾಲಿ ಮಠಾಧೀಶರು ಇಟ್ಟ ಬೇಡಿಕೆಗೆ ವ್ಯತಿರಿಕ್ತವಾಗಿ ಭರವಸೆ ನೀಡಿರುವ ಸರ್ಕಾರ ಗೊಂದಲ ಸೃಷ್ಟಿ ಮಾಡಿದೆ. ಸಂವಿಧಾನದಲ್ಲಿ ಅವಕಾಶವಿಲ್ಲದ ಭರವಸೆಗಳನ್ನು ನೀಡಿ ಜನರಿಗೆ ಸುಳ್ಳು ಹೇಳಿ ಹಾದಿ ತಪ್ಪಿಸುತ್ತಿದೆ ಗಂಭೀರ ಆರೋಪ ಮಾಡಿದರು.
ಮೀಸಲಾತಿ ಎನ್ನುವುದು ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ. ಸರ್ಕಾರ ಮೀಸಲಾತಿ ನೀಡುವುದಾದರೆ ನೀಡುವುದಾಗಿ ದೃಢವಾಗಿ ಹೇಳಲಿ. ಮೀಸಲಾತಿ ಹೆಸರಿನಲ್ಲಿ ಜಾತಿ, ಜಾತಿಗಳ ನಡುವೆ ಕಲಹಕ್ಕೆ ದಾರಿ ಮಾಡಿಕೊಡಬಾರದು. ಸಾಮರಸ್ಯ ಮೂಡಿಸುವುದು ಸರ್ಕಾರದ ಜವಾಬ್ದಾರಿಯೇ ಹೊರತು ದಾರಿ ತಪ್ಪಿಸುವುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.