ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಪರಿಸ್ಥಿತಿ ಹಾಗೂ ಮಾನಸಿಕತೆ ಈಗ ಬದಲಾಗುತ್ತಿದೆ ಎಂಬುದಕ್ಕೆ ಉದಾಹರಣೆಯೆಂಬಂತ ಘಟನೆಯೊಂದು ವರದಿಯಾಗಿದ್ದು ಇಬ್ಬರು ಶಸ್ತ್ರ ಸಜ್ಜಿತ ಭಯೋತ್ಪಾದಕರನ್ನು ಗ್ರಾಮಸ್ಥರೇ ಹಿಡಿದು ಪೋಲೀಸರ ಕೈಗೊಪ್ಪಿಸಿದ ಘಟನೆ ನಡೆದಿದೆ.
ಭಾನುವಾರ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಇಬ್ಬರು ಶಸ್ತ್ರಸಜ್ಜಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಗ್ರಾಮಸ್ಥರೇ ಹೆಡೆಮುರಿ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಜಮ್ಮು ಕಾಶ್ಮೀರತ ಪೊಲೀಸರು ತಿಳಿಸಿದ್ದಾರೆ.
ರಿಯಾಸಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಐಇಡಿ ಸ್ಫೋಟದ ರೂವಾರಿ ಲಷ್ಕರ್ ಕಮಾಂಡರ್ ತಾಲಿಬ್ ಹುಸೇನ್ ಎಂಬಾತನ ತಲೆಗೆ ಬಹುಮಾನ ಘೋಷಿಸಲಾಗಿತ್ತು. ಇದರ ಹಿನ್ನೆಲೆಯಲ್ಲಿ ಟುಕ್ಸಾನ್ ಗ್ರಾಮದಲ್ಲಿ ಅಡಗಿದ್ದ ಲಷ್ಕರ್ ಕಮಾಂಡರ್ ರಿಯಾಸಿಯನ್ನು ಗ್ರಾಮಸ್ಥರು ಸದೆಬಡಿದು ಪೋಲೀಸರಿಗೆ ಒಪ್ಪಿಸಿದ್ದು ಟುಕ್ಸಾನ್ ನಲ್ಲಿ ಆತನನ್ನು ಬಂಧಿಸಲಾಗಿದೆ. ಜೊತೆಗೆ ಮತ್ತೊಬ್ಬ ಭಯೋತ್ಪಾದಕ ಫೈಝಲ್ ಅಹಮದ್ ದಾರ್ ಎಂಬಾತನನ್ನೂ ಗ್ರಾಮದಲ್ಲಿ ಬಂಧಿಸಲಾಗಿದೆ.
“ಎಲ್ಇಟಿಯ ಇಬ್ಬರು ಭಯೋತ್ಪಾದಕರನ್ನು ರಿಯಾಸಿ ಜಿಲ್ಲೆಯ ತುಕ್ಸಾನ್ ಗ್ರಾಮಸ್ಥರು ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಿದ್ದಾರೆ. ಎರಡು ಎಕೆ-47 ರೈಫಲ್ಗಳು, ಏಳು ಗ್ರೆನೇಡ್ಗಳು ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಗ್ರಾಮಸ್ಥರಿಗೆ ಡಿಜಿಪಿ ₹ 2 ಲಕ್ಷ ಬಹುಮಾನ ಘೋಷಿಸಿದ್ದಾರೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಗ್ರಾಮಸ್ಥರ ಧೈರ್ಯಶಾಲಿ ಕಾರ್ಯವನ್ನು ಶ್ಲಾಘಿಸಿದ್ದಾರೆ.