ಹೊಸದಿಗಂತ ಡಿಜಿಟಲ್ ಡೆಸ್ಕ್:
ಬನ್ನಿ ಉತ್ಸವದಲ್ಲಿ ನಡೆದ ಕೋಲು ಕಾಳಗದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವರಗಟ್ಟುವಿನಲ್ಲಿ ನಡೆದಿದೆ. ದಸರಾ ಹಬ್ಬದ ರಾತ್ರಿ ಮಲೆ ಮಲ್ಲೇಶ್ವರ ಸ್ವಾಮಿಯ ಬನ್ನಿ ಉತ್ಸವ ಆರಂಭವಾಗುತ್ತದೆ. ಈ ವೇಳೆ ಉತ್ಸವ ಮೂರ್ತಿ ದೇವಾಲಯ ತಲುಪುವವರೆಗೂ ಎರಡು ಗ್ರಾಮಗಳ ಜನರು ಕೋಲು ಹಿಡಿದು ಮೂರ್ತಿಗಳಿಗಾಗಿ ಹೊಡೆದಾಡುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ದೇವರಗಟ್ಟು ಬನ್ನಿ ಉತ್ಸವ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದ್ದು, ಮೂರು ಸಾವು ನೂರಕ್ಕೂ ಹೆಚ್ಚು ಜನರ ಗಾಯಗಳೊಂದಿಗೆ ಅಂತ್ಯ ಹಾಡಿದೆ.
ಗಾಯಗೊಂಡವರಲ್ಲಿ ಎಂಟು ಜನರ ಸ್ಥಿತಿ ಗಂಭೀರವಾಗಿದ್ದು, ಎಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಷ್ಟೇ ಬಿಗಿ ಭದ್ರತೆ ಕೈಗೊಂಡರೂ ನಡೆಯಬೇಕಾದ ದುರಂತ ನಡೆದು ಹೋಗಿದೆ. ಬನ್ನಿ ಉತ್ಸವ ಎಂಬ ಈ ಕೋಲು ಕಾಳಗದಲ್ಲಿ ಇಂತಹ ಘಟನೆಗಳು ಪ್ರತಿ ವರ್ಷ ನಡೆಯುತ್ತಲೇ ಇರುತ್ತವೆ. ಎಷ್ಟೇ ಪೊಲೀಸರಿದ್ದರೂ ಜನ ಪ್ರಾಣ ಕಳೆದುಕೊಳ್ಳುವುದು, ಗಾಯಗೊಳ್ಳುವುದು ಸಾಮಾನ್ಯ ಸಂಗತಿ. ಈ ವರ್ಷವೂ ಕೋಲು ಕಾದಾಟ ಸಂದರ್ಭದಲ್ಲಿ ರಕ್ತ ಚೆಲ್ಲಿದೆ.
ಈ ಉತ್ಸವವನ್ನು ವೀಕ್ಷಿಸಲು ಎರಡು ತೆಲುಗು ರಾಜ್ಯಗಳ ಜೊತೆಗೆ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದ ಜನರು ಆಗಮಿಸುತ್ತಾರೆ. ಈ ಸುದ್ದಿ ಕುರಿತ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ