ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಕಂಪಲ್ಲಿ ಬ್ಯಾಲೆನ್ಸಿಂಗ್ ಜಲಾಶಯದಲ್ಲಿ ಮೂವರು ಫಾರ್ಮಸಿ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಈಜಲು ಹೋಗಿದ್ದ ವಿದ್ಯಾರ್ಥಿಗಳು ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಈಜುಗಾರರ ಸಹಾಯದಿಂದ ಇಬ್ಬರ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಇನ್ನೋರ್ವ ವಿದ್ಯಾರ್ಥಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತರನ್ನು ಆಕಾಶ್, ಗಣೇಶ್ ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ.
ಹೈದರಾಬಾದ್ನ ಚಿಲುಕೂರು ಬಾಲಾಜಿ ಫಾರ್ಮಸಿ ಕಾಲೇಜಿನ 8 ವಿದ್ಯಾರ್ಥಿಗಳು ನಾಗಾರ್ಜುನ ಸಾಗರ ನೋಡಲು ಬಂದಿದ್ದರು. ಹಿಂದಿರುಗುವಾಗ ಅಕ್ಕಂಪಲ್ಲಿ ಬ್ಯಾಲೆನ್ಸಿಂಗ್ ಜಲಾಶಯಕ್ಕೆ ಹೋದ ಸ್ನೇಹಿತರು ಆಕಾಶ್, ಗಣೇಶ್ ಮತ್ತು ಕೃಷ್ಣ ಒಟ್ಟಿಗೆ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಜಲಾಶಯದಲ್ಲಿ ಪತ್ತೆಯಾದ ಇಬ್ಬರ ಶವಗಳನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕೊನೆ ಉಸಿರಲ್ಲಿದ್ದಾರೇನೋ ಎಂಬ ಆಸೆಯಿಂದ ವೈದ್ಯರು ಅವರನ್ನು ಉಳಿಸಲು ಶತಪ್ರಯತ್ನ ಮಾಡಿದರು. ಹಾರ್ಟ್ ಪಂಪಿಂಗ್ ಚಿಕಿತ್ಸೆ ಜತೆಗೆ ಬಾಯಿಯಲ್ಲಿ ಗಾಳಿ ಊದಿ ವಿದ್ಯಾರ್ಥಿಗಳನ್ನು ರಕ್ಷಿಸಲು ಯತ್ನಿಸಿದರು. ಆದರೆ ಅದಾಗಲೇ ಸಮಯ ಮೀರಿದ್ದರಿಂದ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.