ಹೊಸದಿಗಂತ ವರದಿ ಮೈಸೂರು:
ಜಿಲ್ಲೆಯ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಭಯಹುಟ್ಟಿಸಿದ್ದ ನರಭಕ್ಷಕ ಹುಲಿ ಅಂತೂ ಸೆರೆ ಸಿಕ್ಕಿದೆ. ಕಳೆದ ಶುಕ್ರವಾರ ಕಾಡಂಚಿಗೆ ದನ ಮೇಯಿಸೋದಕ್ಕೆ ಹೋಗಿದ್ದ ರತ್ನಮ್ಮ(49) ಎಂಬುವವರ ಮೇಲೆ ಹುಲಿ ದಾಳಿ ನಡೆಸಿ, ಕೊಂದು ಹಾಕಿತ್ತು.
ನರಭಕ್ಷಕ ಹುಲಿಯ ಸಂಚಾರದಿಂದಾಗಿ ಭಯಭೀತರಾಗಿದ್ದ ಜನ, ಹೊರಬರಲೂ ಹೆದರುತ್ತಿದ್ದರು. ಅಲ್ಲದೇ ಕೂಡಲೇ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಕೂಡಲೇ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಸಿಬ್ಬಂದಿ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.
ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ, ಸೆರೆಹಿಡಿದು ಕೊಂಡೊಯ್ಯಲಾಗಿದೆ.