ಹೊಸದಿಗಂತ ವರದಿ, ಶಿವಮೊಗ್ಗ:
ಹಿಂದು ಸಂಘಟನೆ ಕಾರ್ಯಕರ್ತರ ಹತ್ಯೆ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಹತ್ಯೆಯಾಗಿರುವ ಬಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಭಾನುವಾರ ಭೇಟಿ ನೀಡಿ ಸಾಂತ್ವನ ಹೇಳಿ, ಸರ್ಕಾರದಿಂದ ನೀಡಲಾಗಿರುವ ೨೫ ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಹಿಂದೂ, ಮುಸ್ಲಿಂ, ಕ್ರೈಸ್ತರು ಒಂದೇ ತಾಯಿ ಮಕ್ಕಳಂತೆ ಬದುಕಬೇಕು ಎಂಬುದು ಪ್ರಧಾನಿ ಮೋದಿಯವರ ಆಶಯವಾಗಿದೆ. ಇದು ಎಲ್ಲರ ಅಪೇಕ್ಷೆ ಕೂಡ. ಹೀಗಾಗಿ ಇಂತಹ ಕೃತ್ಯಗಳಿಗೆ ಆಸ್ಪದ ಇಲ್ಲದಂತೆ ನಡೆದುಕೊಳ್ಳಬೇಕಿದೆ ಎಂದರು.
ಹರ್ಷ ಕುಟುಂಬಕ್ಕೆ ಸಾಂತ್ವನ ಹೇಳುವುದು ಬಿಟ್ಟರೆ ಬೇರೆ ಏನೂ ಇಲ್ಲ. ಹಿಂದು ಸಂಘಟನೆಯ ಯುವ ಮುಖಂಡನಾಗಿ ಈ ಭಾಗದಲ್ಲಿ ಬೆಳೆಯುತ್ತಿದ್ದ ಹರ್ಷನ ಏಳಿಗೆ ಸಹಿಸದೆ ಈ ಅಮಾನವೀಯ ಕೃತ್ಯ ನಡೆಸಲಾಗಿದೆ. ಆತನ ಕಳೆದುಕೊಂಡ ನೋವು ತಡೆಯುವ ಶಕ್ತಿ ಕುಟುಂಬಕ್ಕೆ ಭಗವಂತ ಕೊಡಲು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್. ರುದ್ರೆಗೌಡ ಸೇರಿದಂತೆ ಇತರರು ಇದ್ದರು.