ಹೊಸ ದಿಗಂತ ವರದಿ, ಕಲಬುರಗಿ:
ರಾಜ್ಯದಲ್ಲಿ 26 ಒಳಪಂಗಡಗಳನ್ನೊಳಗೊಂಡ 70 ಲಕ್ಷ ಜನಸಂಖ್ಯೆ ಹೊಂದಿರುವ ಆಯ೯ ಈಡಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಆಯ೯ ಈಡಿಗ ಸಮುದಾಯದ ರಾಷ್ಟ್ರೀಯ ಮಹಾ ಮಂಡಳಿ ಅಧ್ಯಕ್ಷರಾದ ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.
ಆವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿರುವ ಸಣ್ಣ ಸಣ್ಣ ಸಮುದಾಯಕ್ಕೆ ನಿಗಮ ಮಂಡಳಿಗಳು ರಚನೆ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಈಡಿಗ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಈ ಭಾಗದ ಎಳು ಜನ ಶಾಸಕರಿದ್ದರು, ನಮ್ಮ ಸಮಾಜದ ಪರವಾಗಿ ಧ್ವನಿ ಎತ್ತದೆ ಇರುವುದು ಅತ್ಯಂತ ದುಖಃದ ವಿಷಯವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮೂರು ಬಾರಿ ಭೇಟಿ ಮಾಡಿದರು ಸಹ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುತ್ತಿಲ್ಲ ಎಂದರು.
ಮತ ಹಾಕಿಕೊಳ್ಳಲು ಮಾತ್ರ ನಮ್ಮ ಸಮುದಾಯ ಬೇಕು. ಆದರೆ ಆ ಸಮುದಾಯಕ್ಕೆ ನ್ಯಾಯ ಕೊಡಿಸುವ ಬಗ್ಗೆ ಯಾರು ಸಹ ಯೋಚನೆ ಮಾಡುತ್ತಿಲ್ಲ. ಇದೇ ತರಹ ಮುಂದುವರೆದರೆ, ಮುಂಬರುವ ಸಾವ೯ತ್ರಿಕ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು. ಬಜೆಟ್ ಗೆ ಮುನ್ನವೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ, ಸ್ಥಳೀಯ ಶಾಸಕರ ಮನೆ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸತೀಶ್ ಗುತ್ತೇದಾರ, ವೆಂಕಟೇಶ್ ಗುಂಡಾನ ಸೇರಿದಂತೆ ಇತರರು ಉಪಸ್ಥಿತರಿದ್ದರು.