ಹೊಸದಿಗಂತ ವರದಿ, ಕುಶಾಲನಗರ:
ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕೊಡಗಿನ ಗಡಿ ಭಾಗವಾದ ಶಿರಂಗಾಲದಿಂದ ಕುಶಾಲನಗರದವರೆಗೆ ಭಾನುವಾರ ಆಯೋಜಿಸಲಾಗಿದ್ದ ಟ್ರ್ಯಾಕ್ಟರ್ ಜಾಥಾಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಚಾಲನೆ ನೀಡಿದರು.
ಹೂವು ಮತ್ತು ರಾಷ್ಟ್ರಧ್ವಜಗಳಿಂದ ಸಿಂಗಾರಗೊಂಡಿದ್ದ ಟ್ರ್ಯಾಕ್ಟರ್’ಗಳ ನಡುವೆ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಶಿರಂಗಾಲದಿಂದ ಮಣಜೂರು ಮಾರ್ಗವಾಗಿ ತೊರೆನೂರು,ಕಣಿವೆ, ಕೂಡಿಗೆ ಮೂಲಕ ಸಾಗಿ ಬಂದ ಟ್ರ್ಯಾಕ್ಟರ್ ಜಾಥಾಕ್ಕೆ ನೂರಾರು ಸಂಖ್ಯೆಯಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು ಸೇರಿಕೊಂಡವು.
ಟ್ರ್ಯಾಕ್ಟರ್’ನಲ್ಲಿ ಅಳವಡಿಸಲಾಗಿದ್ದ ಭಾರತಾಂಬೆಯ ಬೃಹತ್ ಭಾವಚಿತ್ರಕ್ಕೆ ಕೂಡುಮಂಗಳೂರು ಬಿ ಜೆ ಪಿ ಶಕ್ತಿ ಕೇಂದ್ರದ ವತಿಯಿಂದ ಪುಷ್ಪಾರ್ಚನೆ ಮಾಡಲಾಯಿತು. ನಂತರ ಕೂಡುಮಂಗಳೂರು ಮುಳ್ಳುಸೋಗೆ ಗ್ರಾಮದ ಮೂಲಕ ಸಾಗಿದ ಜಾಥಾ ಕುಶಾಲನಗರ ಗಣಪತಿ ದೇವಾಲಯ ಬಳಿ ಕೊನೆಗೊಂಡಿತು.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಶಿರಂಗಾಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾಗೀರತಿ, ಕೂಡುಮಂಗಳೂರು ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ, ಪ್ರಮೀಣ್ ಸೇರಿದಂತೆ 5 ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧ್ಯಕ್ಷರು, ಉಪಾಧ್ಯಕರು, ಸದಸ್ಯರು ಶಕ್ತಿ ಮಹಿಳಾ ಘಟಕದ ಅಧ್ಯಕ್ಷರು, ಸದಸ್ಯರು, ಬಿಜೆಪಿಯ ವಿವಿಧ ಘಟಕದ ಪದಾಧಿಕಾರಿಗಳು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ