ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್ನಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಸಿಡಿಲಿಗೆ ಇಬ್ಬರು ಯುವ ರೈತರು ಮೃತಪಟ್ಟಿದ್ದಾರೆ. ಭಾಲ್ಕಿಯ ನಾವದಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೇವಣಸಿದ್ದ ಹಾಗೂ ಜೇವರ್ಗಿಯ ಯಲ್ಲಾಲಿಂಗ ಸಿಡಿಲಿಗೆ ಬಲಿಯಾದವರು.
ನಿನ್ನೆ ಸಂಜೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆಯೇ ಜೋರು ಮಳೆ ಶುರುವಾಗಿದೆ. ಸುತ್ತಮುತ್ತ ಯಾವ ಶೆಲ್ಟರ್ ವ್ಯವಸ್ಥೆಯೂ ಇಲ್ಲ. ಅಲ್ಲೇ ಬದಿಯಲ್ಲಿದ್ದ ಮಾವಿನ ಮರದಡಿಗೆ ಆಶ್ರಯ ಪಡೆದಿದ್ದಾರೆ.
ಈ ವೇಳೆ ಮರಕ್ಕೆ ಸಿಡಿಲು ಬಡಿದಿದ್ದು, ಕೆಳಗಡೆ ಇದ್ದ ಇಬ್ಬರು ರೈತರು ಅಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮನೆಗೆ ಆಧಾರವಾಗಿದ್ದ ಮಕ್ಕಳು ಈ ರೀತಿ ಶವವಾಗಿ ಮಲಗಿರುವುದನ್ನು ಕಂಡು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.



