ಕನ್ಹಯ್ಯಾಗೂ ಮೊದಲು ಮುಸ್ಲಿಮರಿಂದ ಶಿರಚ್ಛೇದನವಾಗಿದ್ದರು ಉಮೇಶ ಕೊಲ್ಹೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಜಸ್ಥಾನದ ಉದಯಪುರದಲ್ಲಿ ಮಾತಾಂಧರಿಂದ ದರ್ಜಿ ಕನ್ಹಯ್ಯಾಲಾಲ್ ಹತ್ಯೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ನೂಪುರ ಶರ್ಮಾಗೆ ಬೆಂಬಲ ನೀಡಿದ್ದ ಮತ್ತೋರ್ವ ವ್ಯಕ್ತಿಯನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ಅಮಾನುಷವಾಗಿ ಹತ್ಯೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 21ರಂದು ಈ ಘಟನೆ ನಡೆದಿದ್ದು, ಇಲ್ಲಿನ ಮೆಡಿಕಲ್ ಶಾಪ್ ಮಾಲೀಕ ಉಮೇಶ್ ಕೊಲ್ಹೆ (54) ಕೊಲೆಯಾಗಿದ್ದಾರೆ. ನೂಪುರ್‌ ಶರ್ಮಾರನ್ನು ಬೆಂಬಲಿಸಿ ಪೋಸ್ಟ್‌ ಹಂಚಿಕೊಂಡಿದ್ದೇ ಉಮೇಶ್‌ ಕೊಲೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಉಮೇಶ್ ಕೋಲ್ಹೆ ಅವರು ಜೂ. 21 ರಂದು ರಾತ್ರಿ ತಮ್ಮ ಮೆಡಿಕಲ್ ಶಾಪ್‌ನಿಂದ ಸ್ಕೂಟರ್‌ ವಾಪಸಾಗುತ್ತಿದ್ದಾಗ ಅವರ ಮೇಲೆ ಮುಗಿಬಿದ್ದಿದ್ದ ಮೂವರು ದುಷ್ಕರ್ಮಿಗಳು, ಚಾಕು ಮೊದಲಾದ ಹರಿತವಾದ ಆಯುಧಗಳನ್ನು ಹಿಡಿದು ಆಕ್ರಮಣ ನಡೆಸಿದ್ದಾರೆ. ಘಟನೆ ನಡೆದಾಗ ಉಮೇಶ್ ಅವರ  ಅವರ ಪತ್ನಿ ಹಾಗೂ ಪುತ್ರ ಅವರ ಹಿಂದೆಯೇ ಇನ್ನೊಂದು ಬೈಕ್‌ನಲ್ಲಿ ಬರುತ್ತಿದ್ದರು.
ಅವರ ಸಮ್ಮುಖದಲ್ಲಿಯೇ ಈ ದಾಳಿ ನಡೆದಿದೆ. ಅವರು ಕೂಗಿಕೊಂಡಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣ ಉಮೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಉಮೇಶ್ ಕೋಲ್ಹೆ ಅವರ ಪುತ್ರನ ದೂರಿನ ಮೇರೆಗೆ ಅಮರಾವತಿಯ ಸಿಟಿ ಕೊತ್ವಾಲಿ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮುದ್ದ್ಸಿರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24), ಶೋಯೆಬ್ ಖಾನ್ (22), ಅತಿಬ್ ರಶೀದ್ (22)  ಎಂಬುವವರನ್ನು ಬಂಧಿಸಲಾಗಿದೆ.  ಹಮೀಮ್ ಅಹ್ಮದ್ ಫಿರೋಜ್ ಅಹ್ಮದ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಪ್ರಕರಣದ ತನಿಖೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪೊಲೀಸರು ತನಿಖೆಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಈ ಹತ್ಯೆಯಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಈ ಕೊಲೆಯ ಮಾಸ್ಟರ್ ಮೈಂಡ್ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!