ಹೊಸದಿಗಂತ ವರದಿ, ಮಡಿಕೇರಿ:
ಶಾಲಾ, ಕಾಲೇಜುಗಳಲ್ಲಿ ಸಮಾನತೆಯನ್ನು ಬೋಧಿಸುವ ಕಡ್ಡಾಯ ಸಮವಸ್ತ್ರ ನೀತಿ ಪಾಲನೆಯಾಗಬೇಕೆಂದು ಹಿಂದೂ ಜಾಗರಣ ವೇದಿಕೆ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಸಂಘಟನಾ ಕಾರ್ಯದರ್ಶಿ ಮಹೇಶ್ ಹಾಗೂ ಪ್ರಚಾರ ಪ್ರಮುಖ್ ಕುಮಾರ್, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಸಮವಸ್ತ್ರ ನೀತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಶಾಲಾ, ಕಾಲೇಜುಗಳು ವಿದ್ಯಾ ದಾನದ ಕೇಂದ್ರಗಳಾಗಿದ್ದು, ಜಾತಿ, ಮತ, ಪಂಥ, ಭೇದವಿಲ್ಲದೆ ಸಾಮರಸ್ಯದಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಬೇಕೆಂದು ಸಮವಸ್ತ್ರದ ಶಿಸ್ತನ್ನು ತರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿರುವ ಕಾರಣಕ್ಕಾಗಿ ಕೆಲವು ಕಾಲೇಜುಗಳ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತಿರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಅವರವರ ಸಾಂಪ್ರದಾಯಿಕ ಉಡುಪುಗಳನ್ನು ವಿದ್ಯಾರ್ಥಿಗಳು ಧರಿಸಿಕೊಂಡು ಬರಲು ಆರಂಭಿಸಿದರೆ ಶೈಕ್ಷಣಿಕ ವಾತಾವರಣ ಸಂಪೂರ್ಣ ಹದಗೆಡಲಿದೆ ಎಂದು ಅವರುಗಳು ಕಳವಳ ವ್ಯಕ್ತಪಡಿಸಿದರು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಮಾನತೆಯ ಭಾವನೆ ಬೆಳೆಸಬೇಕೆ ಹೊರತು ಪ್ರತ್ಯೇಕತೆಯ ಮಾನಸಿಕತೆಯನ್ನಲ್ಲ. ಆದ್ದರಿಂದ ಇಂತಹ ಗೊಂದಲಗಳಿಗೆ ಸರ್ಕಾರ ಅವಕಾಶ ನೀಡದೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಮುಖರು ಒತ್ತಾಯಿಸಿದರು.