ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳಕೊಲ್ಲಿಯಲ್ಲಿ ಉಂಟಾದ ಅಸಾನಿ ಚಂಡಮಾರುತದ ಎಫೆಕ್ಟ್ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಪರಿಶೀಲನೆ ನಡೆಸಿದರು. ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕಿಸಿದರು.ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಕಿನಾಡ ಮತ್ತು ವಿಶಾಖಪಟ್ಟಣಂ ನಡುವೆ ಚಂಡಮಾರುತ ಕರಾವಳಿಯನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಎಪಿಯ ಕಾಕಿನಾಡ, ವಿಶಾಖಪಟ್ಟಣಂ, ಕೃಷ್ಣಾ, ಪೂರ್ವ ಗೋದಾವರಿ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತವು ಗಂಟೆಗೆ 75 ರಿಂದ 95 ಕಿ.ಮೀ ವೇಗದಲ್ಲಿ ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ. ಒಡಿಶಾ ಕರಾವಳಿಯಲ್ಲಿ ಗಂಟೆಗೆ 45-65 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಆಂಧ್ರಪ್ರದೇಶದಲ್ಲಿ 9 NDRF ತಂಡಗಳನ್ನು ನಿಯೋಜಿಸಿದ್ದು, 7 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಒಡಿಶಾ ಕರಾವಳಿಯಲ್ಲಿ ಎನ್ಡಿಆರ್ಎಫ್ ತಂಡ ಸಿದ್ಧವಾಗಿದೆ. 17 ತಂಡಗಳನ್ನು ಸ್ಟ್ಯಾಂಡ್ಬೈನಲ್ಲಿ ಇರಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 12 NDRF ತಂಡ ನಿಯೋಜಿಸಲಾಗಿದ್ದು, ಹೆಚ್ಚುವರಿ ಐದು ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಅಗತ್ಯವಿದ್ದರೆ ಹೆಚ್ಚುವರಿ ಪಡೆಗಳು ಸಹ ಸಿದ್ಧವಾಗಿವೆ ಎಂದು ಅಜಯ್ ಭಲ್ಲಾ ಹೇಳಿದ್ದಾರೆ. ಚಂಡಮಾರುತದ ಪರಿಸ್ಥಿತಿಗಳ ಬಗ್ಗೆ ಜಾಗರೂಕರಾಗಿರಲು ನೆರವು ನೀಡಲು ಆಂಧ್ರ ಪ್ರದೇಶ ಮತ್ತು ಒಡಿಶಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವಂತೆ ಅಜಯ್ ಭಲ್ಲಾ ಕೇಂದ್ರ ಸಚಿವಾಲಯಗಳಿಗೆ ನಿರ್ದೇಶನ ನೀಡಿದರು.