ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಬೆನ್ನಲ್ಲೇ ಕೇಂದ್ರ ಸರಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದು, ಶೇ.100ರಷ್ಟು ದೋಷರಹಿತವಾಗಿ ಮರುಪರೀಕ್ಷೆ ನಡೆಸಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ.
ಜೂನ್ 21 ರಂದು ಮರುಪರೀಕ್ಷೆ
2026ರ ಜಾಗರಣ್ ಭಾರತ್ ಎಜುಕೇಶನ್ ಕಾಂಕ್ಲೇವ್ನಲ್ಲಿ ಮಾತನಾಡಿದ ಸಚಿವ ಪ್ರಧಾನ್, ಶಿಕ್ಷಣದ ಭ್ರಷ್ಟಾಚಾರದಿಂದಾಗಿ ಒಬ್ಬ ಅರ್ಹ ವಿದ್ಯಾರ್ಥಿ ತನ್ನ ವೈದ್ಯಕೀಯ ಸೀಟನ್ನು ಕಳೆದುಕೊಳ್ಳಬಾರದು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಜೂನ್ 21 ರಂದು ಮರುಪರೀಕ್ಷೆಯನ್ನು ನಡೆಸಲಾಗುವುದು. 100% ದೋಷರಹಿತವಾಗಿ ನಡೆಸಲು ಸರ್ಕಾರ ಬದ್ಧ ಎಂದು ತಿಳಿಸಿದರು.
22 ಲಕ್ಷ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ಸಚಿವರು
ಪ್ರಶ್ನೆಪತ್ರಿಕೆ ಸೋರಿಕೆಯಿಂದ ಸುಮಾರು 22 ಲಕ್ಷ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆ. ಅವರ ಕಠಿಣ ಶ್ರಮ ವ್ಯರ್ಥವಾಗರಬಾರದು .ಅದಕ್ಕಾಗಿ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. ಆ ಮಕ್ಕಳ ನೋವಿನ ಹೊಣೆಗಾರಿಕೆಯನ್ನು ಸ್ವೀಕರಿಸಿ ನಾನು ಇಂದು ಹೇಳುತ್ತಿದ್ದೇನೆ. ಖಂಡಿತ ದೋಷ ರಹಿತ ಮರುಪರೀಕ್ಷೆ ನಡೆಸುತ್ತೇವೆ ಎಂದು ಹೇಳಿದರು.
ನಾವು ಯಾವುದೇ ಟೀಕೆ ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದೇವೆ. ಆದರೆ ನಮ್ಮ ಗುರಿ ವ್ಯವಸ್ಥೆಯನ್ನು ಸರಿಪಡಿಸುವುದು ಹೊರತು ನೋಡಿ ಸುಮ್ಮನೆ ಇರುವುದು ಅಲ್ಲ ಎಂದು ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು.



