ಹೊಸದಿಗಂತ ವರದಿ,ವಿಜಯಪುರ:
ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಜನತೆಯಿಂದಲೂ ಸ್ಪಂದನೆ ಸಿಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಕ್ರಾಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂದಗಿ ಕ್ಷೇತ್ರದಲ್ಲಿ ಮೊದಲು ಜೆಡಿಎಸ್ ಉತ್ತಮ ಸಂಘಟನೆ ಇತ್ತು. ಎಂ. ಸಿ. ಮನಗೂಳಿ ನಿಧನದ ನಂತರ ಅವರ ಕುಟುಂಬದವರು ಕಾಂಗ್ರೆಸ್ ಗೆ ಪಕ್ಷಾಂತರವಾದರು. ಈ ಬಾರಿ ಸಿಂದಗಿಯಲ್ಲಿ ಜೆಡಿಎಸ್ ಗೆ ಜನರು ಬೆಂಬಲಿಸುವ ವಿಶ್ವಾಸ ಇದೆ ಎಂದರು.
ಸಿಂದಗಿ ಕ್ಷೇತ್ರಕ್ಕೆ ಶಿವಾನಂದ ಪಾಟೀಲ ಸೋಮಜಾಳ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ ಎಂದರು.
ನಾಳೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುವ ಕುರಿತು ಪ್ರತಿಕ್ರಿಯಿಸಿ, ಮೋದಿಯವರು ಬರಲೇಬೇಕಲ್ಲವೇ. ರಾಜ್ಯದ ಸಮಸ್ಯೆಗೆ ಸ್ಪಂದಿಸ್ತಾರಾ ನೋಡೋಣ ? ಎಂದರು.
ಕಲಬುರ್ಗಿ ಜಿಲ್ಲೆಯ ಮಳಖೇಡ ಗ್ರಾಮಕ್ಕೆ ಬರ್ತಿದ್ದಾರೆ. ಒಂದೇ ತಿಂಗಳಲ್ಲಿ 25 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಮಸ್ಯೆಗೆ ಏನು ಹೇಳುತ್ತಾರೋ ನೋಡೋಣ. ಏನೋ ಕಂದಾಯ ಗ್ರಾಮ ಮಾಡಿ ಹಕ್ಕು ಪತ್ರ ವಿತರಿಸೋಕೆ, ಏನು ದೇಶ ಸೇವೆ ಮಾಡಲಿಲ್ಲ. ಹಕ್ಕುಪತ್ರ ವಿತರಿಸೋಕೆ ಹೋಗ್ತಿದ್ದಾರೆ. ಹಕ್ಕು ಪತ್ರ ಕೊಡೋದರಲ್ಲಿ ಏನಿದೆ ?. ಇದೊಂದು ನಾಟಕ ಎಂದು ಲೇವಡಿ ಮಾಡಿದರು.
ಏನೋ ಒಂದು ಕಾರ್ಯಕ್ರಮ ಮಾಡಬೇಕು ಮಾಡಿಕೊಂಡು ಬರುತ್ತಿದ್ದಾರೆ. ರೈತರಿಗೆ ಮೋದಿ ಏನು ಸಂದೇಶ ಕೊಡುತ್ತಾರೆ ನೋಡೋಣ ಎಂದರು.
ನಾರಾಯಣಪುರ ಸ್ಕಾಡಾ ಯೋಜನೆಗೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅನುದಾನ ವಿಚಾರ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ರಾಜ್ಯ ಸರ್ಕಾರಕ್ಕೆ ಜನಪರ ಕೆಲಸ ಮಾಡುವ ಶಕ್ತಿ ಇಲ್ಲ. ನಾನು ಮೈತ್ರಿ ಸರ್ಕಾರದಲ್ಲಿ ಎಂಟ್ಹತ್ತು ಸಭೆ ಮಾಡಿ, ನಾವು ಕೆಲಸ ಮಾಡಿದ್ದೇವೆ. ಈಗ ಉದ್ಘಾಟನೆಗೆ ಬರ್ತಿದ್ದಾರೆ ಎಂದರು.