ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಬಾಮೈದನ ಮದುವೆ ರಜೆ ಕೊಡಿ ಸಾರ್, ನನ್ನ ಎಮ್ಮೆ ಕರು ಹಾಕಿದ ಆರೈಕೆ ಮಾಡಬೇಕು ರಜೆ ಬೇಕು ಸಾರ್ ಎಂದು ಬರೆದಿದ್ದ ಪತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದು. ಇದೀಗ ಈ ಸಾಲಿಗೆ ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ಕಾನ್ಸ್ಟೆಬಲ್ಯೊಬ್ಬರು ರಜೆ ಕೋರಿ ಬರೆದಿರುವ ರಜೆ ಪತ್ರವೊಂದು ಸೇರಿದೆ.
ಕಾನ್ ಸ್ಟೆಬಲ್ ಬರೆದಿರುವ ರಜೆ ಪತ್ರ ಏನಪ್ಪಾ ಅಂದ್ರೆ ಆತನ ಪತ್ನಿಗೆ ಕೋಪ ಬಂದಿದ್ದು, ಸಮಾಧಾನ ಮಾಡಲು ರಜೆ ಕೋರಿದ್ದಾರೆ. ಇನ್ನೊಂದು ವಿಚಿತ್ರ ಏನಪ್ಪ ಅಂದ್ರೆ ಕಾನ್ ಸ್ಟೇಬಲ್ ರಜೆ ಪತ್ರ ನೋಡಿದ ಅಧಿಕಾರಿಗಳು ಐದು ದಿನ ರಜೆ ಮಂಜೂರು ಮಾಡಿದ್ದಾರೆ. ಅಂದರೆ ಹೆಂಡತಿಗೆ ಕೋಪ ಬಂದರೆ ಮನೆ ಹೇಗಿರತ್ತೆ ಎಂದು ಉನ್ನತ ಅಧಿಕಾರಿಗಳಿಗೂ ಅನುಭವ ಆಗಿರಬೇಕು ಅದಕ್ಕೆ ಒಂದು ದಿನಕ್ಕೆ, ಐದು ದಿನ ರಜೆ ಕೊಟ್ಟಿದ್ದಾರೆ ಎಂಬ ಕಮೆಂಟ್ಗಳು ಹರಿದಾಡುತ್ತಿವೆ
ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ಕಾನ್ಸ್ಟೆಬಲ್ ಗೌರವ್ ಚೌಧರಿ ಭಾರತ-ನೇಪಾಳ ಗಡಿಯಲ್ಲಿರುವ ನೌತಾನ್ವಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಅಂದರೆ ಡಿಸೆಂಬರ್ 2022 ರಲ್ಲಿ ವಿವಾಹವಾಗಿದ್ದು, ಮದುವೆಯಾದ ಕೆಲ ದಿನಗಳಲ್ಲೇ ಪತ್ನಿಯನ್ನು ಬಿಟ್ಟು ಕೆಲಸಕ್ಕೆ ಮರಳಿದ್ದಾರೆ. ಅಂದಿನಿಂದ ಮನೆಗೆ ಹೋಗಲಾರದ ಪರಿಸ್ಥಿತಿ. ಇದರಿಂದ ಗೌರವ್ ಮೇಲೆ ಕೋಪಗೊಂಡ ಪತ್ನಿ ಫೋನ್ನಲ್ಲಿ ಮಾತಾಡುವುದನ್ನೂ ನಿಲ್ಲಿಸಿದ್ದಾಳೆ.
ಪತ್ನಿ ಮುನಿಸನ್ನು ಅರ್ಥ ಮಾಡಿಕೊಂಡ ಪತಿರಾಯ ಮತ್ತೇನು ಮಾಡೋದು ಸಮಾಧಾನ ಮಾಡದೆ ಬೇರೆ ದಾರಿಯಿಲ್ಲ. ತಕ್ಷಣ ಎಎಸ್ಪಿಗೆ ರಜೆ ಪತ್ರ ಬರೆದು…ಮದುವೆಯಾದ ಕೆಲ ದಿನಗಳಲ್ಲೇ ಪತ್ನಿಯನ್ನು ಬಿಟ್ಟು ಬಂದಿದ್ದಕ್ಕೆ ಸಿಟ್ಟಿಗೆದ್ದ ನನ್ ಹೆಂಡತಿ ಫೋನ್ನಲ್ಲೂ ಮಾತಾನಾಡುತ್ತಿಲ್ಲ ಸಾರ್... ಹಾಗಾಗಿ ಪತ್ನಿಯನ್ನು ಸಮಾಧಾನ ಪಡಿಸಲು ಒಂದೆರೆಡು ದಿನ ರಜೆ ನೀಡುವಂತೆ ರಜೆ ಪತ್ರದಲ್ಲಿ ಮನವಿ ಮಾಡಿದ್ದಾನೆ. ಪತ್ರ ನೋಡಿದ ಎಎಸ್ಪಿ, ಗೌರವ್ ಅವರ ನೋವನ್ನು ಅರ್ಥಮಾಡಿಕೊಂಡು ಐದು ದಿನಗಳ ರಜೆ ಮಂಜೂರು ಮಾಡಿದ್ದಾರೆ. ಇದೀಗ ರಜೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.