ಹೊಸದಿಗಂತ ವರದಿ, ಅಂಕೋಲಾ:
ಸಮುದ್ರಯಾನದ ಮೂಲಕ ಭಾರತ ಸುತ್ತಿದ್ದ ವಾಸ್ಕೋ ಡ ಗಾಮ ನಿಗೆ ಅಂಕೋಲೆಯ ನಾಟಿ ಮದ್ದು ನೀಡಿ ಉಪಚರಿಸಲಾಗಿತ್ತು ಎಂಬ ಮಹತ್ವದ ಸಂಗತಿಯನ್ನು ಇಂಡೋ ಪೋರ್ಚುಗೀಸ್ ಲಿಟರರಿ ಫೌಂಡೇಶನ್ ನಿರ್ದೇಶಕ ಡಾ. ಅರವಿಂದ ವಿ. ಯಾಳಗಿ ಪ್ರಸ್ತಾಪಿಸಿದರು.
ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಪಟ್ಟಣದ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಧಾರವಾಡದ ಪ್ರಾದೇಶಿಕ ಪತ್ರಾಗಾರ ಇಲಾಖೆ ವತಿಯಿಂದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕೀರಣದಲ್ಲಿ ಅವರು ಮಾತನಾಡಿದರು.
ವಾಸ್ಗೋಡಿಗಾಮಾ ಅನಾರೋಗ್ಯಕ್ಕೆ ಒಳಗಾದಾಗ ಅಂಕೋಲೆಯ ಬೀರಾ ಗೌಡ ಮತ್ತು 9 ಜನರ ತಂಡ ಬಾರಕೂರಿಗೆ ಹೋಗಿ ಅಲ್ಲಿಂದ ಅಂಜದೀವ್ ಮೂಲಕ ಗೋವಾಕ್ಕೆ ಹೋಗಿ ಆತನಿಗೆ ಉಪಚಾರ ಮಾಡಿದ್ದರು. ಇದನ್ನು ಸ್ವತ: ವಾಸ್ಕೋ ಡ ಗಾಮ ಪೋರ್ಚುಗೀಸ್ ಭಾಷೆಯಲ್ಲಿರುವ ‘ದಿಯಾರ್ ದಿದಿಜ್ಯೋ ವಾಸ್ಕೋ ಡ ಗಾಮ’ ಎಂಬ ಡೈರಿಯಲ್ಲಿ ದಾಖಲಿಸಿದ್ದಾನೆ. ಇದರಲ್ಲಿ ಇನ್ನುಳಿದ ಒಂಬತ್ತೂ ಜನ ಸಹಾಯಕ ನಾಟಿ ವೈದ್ಯರ ಹೆಸರೂ ಸಿಗುತ್ತದೆ ಎಂದರು. ಅದೇ ರೀತಿ ಅಂಕೋಲೆಯ ಉಪ್ಪಿನ ಸತ್ಯಾಗ್ರಹದ ಬಗ್ಗೆ ಆಫ್ರಿಕಾದ ಡರ್ಬಿನ್ ವಿಶ್ವವಿದ್ಯಾಲಯದಲ್ಲಿ ಕಾಣಬಹುದಾಗಿದೆ ಎಂದರು.
ಪದ್ಮಶ್ರೀ ತುಳಸಿ ಗೌಡ ಹೊನ್ನಳ್ಳಿ ಧಾರವಾಡ ಪ್ರಾದೇಶಿಕ ಪತ್ರಾಗಾರದ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ,
ಕೆ.ಎಲ್.ಇ. ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಮಿನಲ್ ನಾರ್ವೇಕರ್ , ಕೆ.ಎಲ್.ಇ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿನಾಯಕ ಜಿ ಹೆಗಡೆ ಉಪನ್ಯಾಸಕ ಮಂಜುನಾಥ ಇಟಗಿ , ಸಾಹಿತಿ ಮಹಾಂತೇಶ ರೇವಡಿ ಮತ್ತಿತರರು ಪಾಲ್ಗೊಂಡಿದ್ದರು.