ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಶೇ.50 ರಷ್ಟು ಮೀಸಲಾತಿ ಸಿಗಬೇಕು: ಪ್ರೊ.ಆರ್. ಶಿವಪ್ಪ

ದಿಗಂತ ವರದಿ ಮೈಸೂರು:

ಪ್ರಸ್ತುತ ಮಹಿಳೆಯರಿಗೆ ರಾಜಕೀಯದಲ್ಲಿ ಶೇ. ಶೇ.33 ರಷ್ಟು ಮೀಸಲಾತಿ ಇದೆ. ಆದರೆ, ನಿಜವಾಗಿಯೂ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಶೇ.50 ರಷ್ಟು ಮೀಸಲಾತಿ ಸಿಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಹೇಳಿದರು.
ಶುಕ್ರವಾರ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸ್ಪರ್ಶ್ (ಎಬಿಎಸ್ ಅಂಡ್ ಐಸಿಸಿ ) ಸಮಿತಿ ವತಿಯಿಂದ `ಲಿಂಗ ಸಮಾನತೆ ಮತ್ತು ಲೈಂಗಿಕ ಕಿರುಕುಳದ ವಿರುದ್ಧ ರಕ್ಷಣೆ’ ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅವರು ವರ್ಚುವಲ್ ಮೂಲಕ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲರೂ ಸಮಾನರು. ಲಿಂಗದ ಆಧಾರ ಮೇಲೆ ತಾರತಮ್ಯ ಮಾಡಬಾರದು ಗಂಡು -ಹೆಣ್ಣು ಇಬ್ಬರು ಸಮಾನರು. ಎಲ್ಲರಿಗೂ ಸಮಾನ ಅವಕಾಶ ಇದೆ. ಸಮಾಜದಲ್ಲಿ ಲಿಂಗ ಸಮಾನತೆ ಇದ್ದರೆ, ದೇಶವನ್ನು ಸದೃಢವಾಗಿ ಕಟ್ಟಬಹುದು. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಹುದು ಎಂಬುದನ್ನು ಇತಿಹಾಸದ ಹಲವು ಘಟನೆಗಳು ನಿರೂಪಿಸಿವೆ. ಲಿಂಗ ಸಬಲೀಕರಣಕ್ಕೆ ನಾವೆಲ್ಲರೂ ಶ್ರಮಿಸಬೇಕು. ಮೈವಿವಿಯಲ್ಲಿರುವ ಎಲ್ಲಾ ಮಹಿಳೆಯರಿಗೆ ಒಳ್ಳೆಯ ವಾತಾವರಣ ಸೃಷ್ಟಿಸಲು ಸ್ಪರ್ಶ್ ಸಮಿತಿ ರಚನೆ ಆಗಿದೆ ಎಂದು ಹೇಳಿದರು.
ಹೆಣ್ಣು ಮಕ್ಕಳನ್ನು ಮನೆಗೆ ಸೀಮಿತಗೊಳಿಸಲಾಗುತ್ತಿದೆ. ಇದು ತಪ್ಪಬೇಕು. ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳಲು ಪೋಷಕರು ಬಿಡಬೇಕು. ಪ್ರತಿಯೊಬ್ಬರಲ್ಲೂ ಸುಪ್ತ ಪ್ರತಿಭೆ ಇರುತ್ತದೆ. ಸಮಾಜಕ್ಕೆ ಅದರ ಪ್ರಯೋಜನ ಸಿಗಬೇಕು ಎಂದು ಹೇಳಿದರು.
ಇಂದಿಗೂ ಎಷ್ಟೋ ದೇಶಗಳಲ್ಲಿ ವರದಕ್ಷಿಣೆ ಪಿಡುಗು ಚಾಲ್ತಿಯಲ್ಲಿದೆ. ಭ್ರೂಣ ಹತ್ಯೆ ಇನ್ನೂ ನಡೆಯುತ್ತಿದೆ. ಸಮಾಜದಲ್ಲಿ ಫೆಮಿನಿಸಂ ಸೇರಿದಂತೆ ಬೇರೆ ಯಾವ ಇಸಂಗಗಳೂ ಬೇಡ. ಎಲ್ಲರಿಗೂ ಬೇಕಿರುವುದು ಸಮಾನತೆ ಅಷ್ಟೇ. ಈ ನಿಟ್ಟಿನಲ್ಲಿ ಸರಕಾರ ಎಲ್ಲಾ ಕಚೇರಿ, ಶಿಕ್ಷಣ ಸಂಸ್ಥೆ ಹಾಗೂ ನ್ಯಾಯಾಲಯದಲ್ಲಿ ಮಹಿಳಾ ಹೆಲ್ಪ್ ಡೆಸ್ಕ್ ಬರಬೇಕು ಎಂದು ತಿಳಿಸಿದರು.
ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯ ಪ್ರಾರಂಭವಾದ ದಿನದಿಂದಲ್ಲೇ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಿದೆ. ಆ ಮೂಲಕ ಮಹಿಳಾ ಶಿಕ್ಷಣಕ್ಕೆ ಪೋಷಕರು ಕೂಡ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸ್ಪರ್ಶ್ ಸಮಿತಿ ಮೈಸೂರು ವಿವಿಯಲ್ಲಿ ಯಾವುದೇ ಮಹಿಳೆಯರು ಅಥವಾ ವಿದ್ಯಾರ್ಥಿನಿಯರಿಗೆ ತೊಂದರೆ ಆದರೆ, ಅವರ ನೆರವಿಗೆ ಬರುತ್ತದೆ. ಸೂಕ್ತ ವಿಚಾರಣೆ ನಡೆಸಿ, ನೊಂದವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿದೆ. ಈ ಸಮಿತಿ ನಡೆಸುವ ಎಲ್ಲಾ ಅರಿವು ಕಾರ್ಯಕ್ರಮ ವಿವಿ ಎಲ್ಲಾ ಸಿಬ್ಬಂದಿಗಳಿಗೆ ತಲುಪಬೇಕು.
ಲಿಂಗ ಸಮಾನತೆ ಬಗ್ಗೆ ಹೆಚ್ಚೆಚ್ಚು ವಿಚಾರ ಸಂಕಿರಣ ಹಾಗೂ ಕಾರ್ಯಕ್ರಮಗಳು ನಡೆಯುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಎನ್‌ಎಸ್‌ಎಲ್ ಐಯುನ ಕಾನೂನು ಪ್ರಾಧ್ಯಾಪಕರಾದ ಪ್ರೊ.ಸರಸು ಎಸ್ತರ್ ಥಾಮಸ್ ಹಾಗೂ ಹೈಕೋರ್ಟ್ ನ ವಕೀಲೆ ಸುಮಿತ್ರಾ ಆಚಾರ್ಯ ಅವರು ಆನ್‌ಲೈನ್ ನಲ್ಲಿ ಉಪನ್ಯಾಸ ನೀಡಿದರು. ಸ್ಪರ್ಶ್ ಸಮಿತಿ ನಿರ್ದೇಶಕಿ ಪ್ರೊ.ಕೆ.ಜಿ.ಆಶಾ ಮಂಜರಿ, ಆಂತರಿಕ ದೂರು ಸಮಿತಿ ನಿರ್ದೇಶಕಿ ಪ್ರೊ.ಅಸೀಮ ನುಸ್ರತ್, ಪ್ರೊ.ಸುತ್ತೂರು ಮಾಲಿನಿ, ಡಾ. ಗೀತಾ ಸೇರಿದಂತೆ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!