ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ನಿರ್ಗಮಿತ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸ್ಪೀಕರ್ ಆಗಿದ್ದ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು ಸೋಮವಾರ ಸದನದದಿಂದ ಬೀಳ್ಕೊಡುಗೆ ಸ್ವೀಕರಿಸುವ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ನಾಯ್ಡು ಅವರನ್ನು ಬೀಳ್ಕೊಡುವ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಸದನಕ್ಕೆ ಇದೊಂದು ಭಾವನಾತ್ಮಕ ಕ್ಷಣ ಎಂದಿದ್ದಾರೆ “ನೀವು ರಾಜಕೀಯದಿಂದ ನಿವೃತ್ತಿ ಹೊಂದಿರುವುದಾಗಿ ಹೇಳಿದ್ದೀರಿ ಆದರೆ ಸಾರ್ವಜನಿಕ ಜೀವನದಿಂದ ನೀವು ಯಾವತ್ತೂ ದಣಿದಿಲ್ಲ. ಕಚೇರಿಯಲ್ಲಿ ನಿಮ್ಮ ಅವಧಿಯು ಕೊನೆಗೊಳ್ಳಬಹುದು ಆದರೆ ನಿಮ್ಮ ಅನುಭವಗಳು ಮುಂಬರುವ ವರ್ಷಗಳಲ್ಲಿ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುತ್ತವೆ” ಎಂದು ಮೋದಿ ಹೇಳಿದ್ದಾರೆ.
ಟಿಎಂಸಿ ಸಂಸದ ಡೆರೆಕ್ ಓ’ಬ್ರಿಯನ್ ಅವರು ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ವೆಂಕಯ್ಯ ನಾಯ್ಡು ಅವರ ಕಥೆಯನ್ನು ಹೇಳುತ್ತಿದ್ದಂತೆ ನಿರ್ಗಮಿತ ಸಭಾಪತಿ ವೆಂಕಯ್ಯನಾಯ್ಡು ಅವರು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ, ಸದನದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದರೂ, ಒತ್ತಡದ ನಡುವೆಯೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಕ್ಕಾಗಿ ನಾಯ್ಡು ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.